ನವದೆಹಲಿ : ಹೊಸದಾಗಿ ಅಸ್ಥಿತ್ವಕ್ಕೆ ಬರಲಿರುವ 'ಜನತಾ ಪರಿವಾರ'ದ ಬಗ್ಗೆ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಟೀಕೆ ಮಾಡಿದ್ದು, ಅದು ಜನತಾಪರಿವಾರವಲ್ಲ, ಮುಲಾಯಂ ಸಿಂಗ್ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಪರಿವಾರ ಎಂದಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲೂ ಪ್ರಸಾದ್ ಯಾದವ್ ಇಬ್ಬರೂ ತಮ್ಮ ಕುಟುಂಬದ ಸಂಬಂಧಗಳನ್ನು ಪಕ್ಷದ ಸಂಬಂಧವನ್ನಾಗಿ ಮಾಡಿಕೊಂಡಿದ್ದಾರೆ. ಜನತಾ ಪರಿವಾರವೆಂದರೆ ಅದು ಮುಲಾಯಂ ಹಾಗೂ ಲಾಲೂ ಪ್ರಸಾದ್ ಅವರ ಪರಿವಾರ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಜಕೀಯ ಅವಕಾಶವಾದಿಗಳಿಂದ ಸಂಘಟಿತವಾಗಿರುವ ಪಕ್ಷದಿಂದ ಬಿಜೆಪಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶ ಸಚಿವ ಆಜಂ ಖಾನ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಯೋಗಿ ಆದಿತ್ಯನಾಥ್, ಭಾರತದ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ನಂಬಿಕೆ ಇಲ್ಲದವರು ಭಾರತವನ್ನು ಬಿಟ್ಟು ಹೋಗಬಹುದು ಎಂದು ಹೇಳಿದ್ದಾರೆ.
ಕೆಲವು ರಾಷ್ಟ್ರ ವಿರೋಧಿಗಳು ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಅಡ್ಡಿಯಾಗುತ್ತಿದ್ದಾರೆ, ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಲು ಪ್ರತ್ಯೇಕವಾದ ಮಾರ್ಗಸೂಚಿಗಳನ್ನೇ ರೂಪಿಸಬೇಕಾಗುತ್ತದೆ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.