BW News Bureau : ಬಿಬಿಎಂಪಿ ಚುನಾವಣೆ ಮುಂದೂಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಪಾಲಿಕೆಯನ್ನು ಸೂಪರ್ಸೀಡ್ ಮಾಡುವ ನಿರ್ಧಾರ ಕೈಗೊಂಡಿದ್ದು, ಆಡಳಿತಾಧಿಕಾರಿ ನೇಮಕ ಮಾಡಲಿದೆ. ಈ ಬಗೆಗಿನ ಆದೇಶ ಶನಿವಾರ ಅಧಿಕೃತವಾಗಿ ಹೊರಬೀಳಲಿದೆ.
ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ಬೆಳವಣಿಗೆ ಕುರಿತು ನಡೆದ ವಿಸ್ತೃತ ಚರ್ಚೆ ನಂತರ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ ಎರಡು:
1. ಸೂಪರ್ಸೀಡ್ ಮಾಡುವುದರಿಂದ ಚುನಾವಣಾ ಆಯೋಗ ಈ ಕ್ಷಣವೇ ಪಾಲಿಕೆ ಚುನಾವಣೆ ನಡೆಸುವುದನ್ನು ತಡೆಯುವ ಅಧಿಕಾರ ಸರ್ಕಾರಕ್ಕೆ ದೊರೆಯುತ್ತದೆ.
2. ಸೋಮವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಅನುಮೋದನೆ ಪಡೆಯುವ ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ಒಪ್ಪಿಗೆ ನೀಡಲು ರಾಜ್ಯಪಾಲರು ಸಮಯಾವಕಾಶ ತೆಗೆದುಕೊಂಡರೂ, ಚುನಾವಣೆಯ ಭೀತಿಯಿಲ್ಲದೆ ಅನುಮೋದನೆ ನೀಡುವವರೆಗೂ ಕಾಯುವ ಅವಕಾಶ ದೊರೆಯುತ್ತದೆ.
ಬಿಬಿಎಂಪಿ ಸೂಪರ್ಸೀಡ್ ಹಾಗೂ ಸೋಮವಾರ ವಿಶೇಷ ಅಧಿವೇಶನದಲ್ಲಿ ಅಂಗೀಕಾರ ಪಡೆಯಲಿರುವ ಬಿಬಿಎಂಪಿ ವಿಭಜನೆ ವಿಧೇಯಕ ಎಂಬ ಎರಡು ಅಸ್ತ್ರಗಳ ಮೂಲಕ ಬಿಬಿಎಂಪಿ ಚುನಾವಣೆ ಆತಂಕದಿಂದ ತಾತ್ಕಾಲಿಕವಾಗಿಯಾದರೂ ಪಾರಾಗುವ ಭರವಸೆ ಸರ್ಕಾರಕ್ಕೆ ಬಂದಿದೆ.
ಇದಕ್ಕೆ ಪೂರಕವಾಗಿಯೇನಡೆದ ಸಚಿವ ಸಂಪುಟದಲ್ಲಿ ಬಿಬಿಎಂಪಿ ವಿಭಜನೆ ತೀರ್ಮಾನದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ಸೋಮವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲು ಸಜ್ಜಾಗಿದೆ. ಆ ಮೂಲಕ ಬಿಬಿಎಂಪಿ ಚುನಾವಣೆ ನಡೆಸಲು ಇರುವ ಅವಕಾಶಗಳ ಎಲ್ಲ ಬಾಗಿಲುಗಳನ್ನು ಬಂದ್ ಮಾಡುವ ತಂತ್ರ ಹೊಸೆದಿದೆ.
ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ವಿಭಜನೆ ಹಾಗೂ ಚುನಾವಣೆ ಮುಂದೂಡಿಕೆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆದು ಅಂತಿಮವಾಗಿ ಬಿಬಿಎಂಪಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಐಎಎಸ್ ಅಧಿಕಾರಿ ಕಠಾರಿಯಾ ವರದಿ ಆಧಾರದ ಮೇಲೆ ಸೂಪರ್ಸೀಡ್ ಮಾಡಿ ಆಡಳಿತಾಧಿಕಾರಿ ನೇಮಕ ಮಾಡುವುದು. ಮತ್ತೂಂದೆಡೆ ಬಿಬಿಎಂಪಿ ಮೂರು ಭಾಗಗಳಾಗಿ ವಿಭಜನೆ ಮಾಡಲು ವಿಧೇಯಕ ಮಂಡಿಸುವ ತೀರ್ಮಾನಕ್ಕೆ ಬರಲಾಯಿತು ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ಚುನಾವಣೆ ಮೇ 30ರೊಳಗೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ತೀರ್ಪು, ಅದಕ್ಕೆ ತಡೆಯಾಜ್ಞೆ ನೀಡುವಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸೋಮವಾರ ನಡೆಯಲಿರುವುದು ಹಾಗೂ ಚುನಾವಣಾ ಆಯೋಗ ಸಹ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ಚರ್ಚೆ ನಡೆದು ಚುನಾವಣೆ ಮುಂದೂಡಲು ಸರ್ಕಾರ ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ಹಲವು ಸಲಹೆಗಳು ವ್ಯಕ್ತವಾದವು.
ಅವ್ಯವಹಾರದ ಕಾರಣಕ್ಕೆ ಸೂಪರ್ಸೀಡ್ ಮಾಡಿದರೆ ಚುನಾವಣೆ ನಡೆಸಲು ಆರು ತಿಂಗಳು ಸಮಯಾವಕಾಶ ದೊರೆಯುವ ಸಾಧ್ಯತೆ ಇದೆ. ಜತೆಗೆ ಸೂಪರ್ಸೀಡ್ ನಿರ್ಧಾರ ಕೈಗೊಂಡರೆ ಚುನಾವಣಾ ಆಯೋಗ ಸಹ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಮುಂದಾಗದಿರಬಹುದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಸೂಪರ್ಸೀಡ್ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ.