Untitled Document
Sign Up | Login    
Dynamic website and Portals
  
April 20, 2015

ಬಿಬಿಎಂಪಿ ವಿಭಜನೆ: ಹೊರಬೀಳಲಿದೆ ಸ್ಪಷ್ಟ ಚಿತ್ರಣ

BW News Bureau : ಬಿಬಿಎಂಪಿ ವಿಭಜನೆ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ನಡೆದಿರುವ ಕಸರತ್ತು ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಸೋಮವಾರ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಬಿಬಿಎಂಪಿಯನ್ನು ವಿಭಜನೆ ಮಾಡಲು ಪಣ ತೊಟ್ಟಿರುವ ರಾಜ್ಯ ಸರ್ಕಾರ ಇದಕ್ಕಾಗಿ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2015 ಅನ್ನು ಮಂಡಿಸಿ ಒಪ್ಪಿಗೆ ಪಡೆಯುವ ಸಲುವಾಗಿ ಸೋಮವಾರ ವಿಧಾನಮಂಡಲದ ಉಭಯ ಸದನಗಳ ಒಂದು ದಿನದ ವಿಶೇಷ ಅಧಿವೇಶನ ಕರೆದಿದೆ.

ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಈ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರ ಮಂಡಿಸುವ ವಿಧೇಯಕವನ್ನು ತೀವ್ರವಾಗಿ ವಿರೋಧಿಸಲು ತೀರ್ಮಾನಿಸಿವೆ. ಆದರೆ, ಬಹುಮತದ ಆಧಾರದ ಮೇಲೆ ಅಂಗೀಕಾರ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾದರೂ ನಂತರ ರಾಜ್ಯಪಾಲರು ಅಂಗೀಕಾರ ಹಾಕುವರೇ ಅಥವಾ ಇಲ್ಲವೇ ಎಂಬುದು ಕುತೂಹಲಕರವಾಗಿದೆ.

ಈ ನಡುವೆ ಬಿಬಿಎಂಪಿಗೆ ಮೇ 30ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಏಕ ಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ಅಂತಿಮ ವಿಚಾರಣೆ ಸೋಮವಾರ ವಿಭಾಗೀಯ ಪೀಠದ ಮುಂದೆ ಬರಲಿದೆ. ಈ ವಿಚಾರಣೆಯ ತೀರ್ಪನ್ನೇ ರಾಜ್ಯ ಚುನಾವಣಾ ಆಯೋಗ ಎದುರು ನೋಡುತ್ತಿದ್ದು, ನ್ಯಾಯಾಲಯದ ನಿರ್ದೇಶನ ಆಧರಿಸಿ ಮುಂದಿನ ನಿಲವು ಕೈಗೊಳ್ಳಲಿದೆ.

ಒಂದೆಡೆ ಮೇ 30ರೊಳಗೆ ಚುನಾವಣೆ ನಡೆಸುವಂತೆ ಏಕ ಸದಸ್ಯ ಪೀಠ ಆದೇಶ ನೀಡಿದ್ದರೆ, ಅದಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡದೇ ಇದ್ದ ಹಂತದಲ್ಲಿ ಸರ್ಕಾರ ಬಿಬಿಎಂಪಿಯನ್ನು ಸೂಪರ್‌ ಸೀಡ್‌ ಮಾಡಿದೆ. ಇದರಿಂದ ಹೈಕೋರ್ಟ್‌ನ ಸೋಮವಾರದ ವಿಚಾರಣೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ಸೂಪರ್‌ ಸೀಡ್‌ ಮಾಡಿರುವ ಕ್ರಮವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ಏಕ ಸದಸ್ಯ ಪೀಠದ ತೀರ್ಪಿನ ಮೇಲೆ ವಿಭಾಗೀಯ ಪೀಠದಿಂದ ಯಾವುದೇ ಆದೇಶ ಹೊರಬಂದರೂ ಬಿಬಿಎಂಪಿ ಚುನಾವಣೆಯನ್ನು ಆರು ತಿಂಗಳ ನಂತರ ನಡೆಸುವ ಸರ್ಕಾರದ ನಿರ್ಣಯ ಅಬಾಧಿತವಾಗಲಿದೆ ಎಂದು ಕಾನೂನು ತಜ್ಞರು ತಿಳಿಸುತ್ತಾರೆ.

ಕಾರಣ, ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಮಾತ್ರ ವಿಭಾಗೀಯ ಪೀಠವು ತೀರ್ಪು ಹೊರಡಿಸಬೇಕಾಗುತ್ತದೆ. ಅಂದರೆ, ಏಕ ಸದಸ್ಯ ಪೀಠಕ್ಕೆ ತಡೆ ನೀಡಬಹುದು ಅಥವಾ ತಡೆ ನೀಡದೆ ಏಕ ಸದಸ್ಯ ಪೀಠದ ತೀರ್ಪು ಪಾಲಿಸುವಂತೆ ನಿರ್ದೇಶಿಸಬಹುದು. ಆದರೆ, ಸೂಪರ್‌ ಸೀಡ್‌ ವಿಚಾರಕ್ಕೆ ಸಂಬಂಧಿಸಿದಂತೆ ವಿಭಾಗೀಯ ಪೀಠ ಮಧ್ಯಪ್ರವೇಶ ಮಾಡುವ ಸಾಧ್ಯತೆ ತೀರಾ ಕಡಿಮೆ. ಸೂಪರ್‌ ಸೀಡ್‌ಗೂ ಮೇಲ್ಮನವಿಯಲ್ಲಿನ ಅಂಶಗಳಿಗೂ ಯಾವುದೇ ಸಂಬಂಧವಲ್ಲ. ಹೀಗಾಗಿ ವಿಭಾಗೀಯ ಪೀಠ ಏಕ ಸದಸ್ಯ ಆದೇಶಕ್ಕೆ ತೆ ನೀಡಿದರೆ, ಸರ್ಕಾರ ನಿರಾಳವಾಗಿ ಸೂಪರ್‌ ಸೀಡ್‌ ಹಾಗೂ ವಿಭಜನೆ ಪ್ರಕ್ರಿಯೆ ಮುಂದುವರಿಸಬಹುದು. ಒಂದು ವೇಳೆ ತಡೆ ನೀಡದೆ ಹೋದರೂ, ಸೂಪರ್‌ ಸೀಡ್‌ ಮಾಡಿದ ನಿರ್ಣಯದ ಆಶ್ರಯ ಪಡೆದು ಸರ್ಕಾರ ಚುನಾವಣೆ ಮುಂದೂಡಬಹುದು ಎಂದು ಕಾನೂನು ಪಂಡಿತರು ಹೇಳುತ್ತಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited