ನವದೆಹಲಿ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶೂನ್ಯದೊಂದಿಗೆ ಬೆರೆತರೆ ಶೂನ್ಯವೇ ಪ್ರಾಪ್ತಿಯಾಗಲಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಏ.14ರಂದು ನಡೆದ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಜೆಡಿಯು ನೊಂದಿಗಿನ ಲಾಲೂ ಪ್ರಸಾದ್ ಯಾದವ್ ಅವರ ಮೈತ್ರಿಯನ್ನು ಶೂನ್ಯಕ್ಕೆ ಹೋಲಿಸಿದ್ದಾರೆ. ನಿತೀಶ್ ಕುಮಾರ್ ಎಂಬ ಶೂನ್ಯದ ಜೊತೆ ಲಾಲೂ ಪ್ರಸಾದ್ ಯಾದವ್ ಎಂಬ ಇನ್ನೊಂದು ಶೂನ್ಯ ಬೆರೆತರೆ ಪ್ರಾಪ್ತಿಯಾಗಲಿರುವುದೂ ಶೂನ್ಯವೇ ಎಂದು ಲೇವಡಿ ಮಾಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಮತಗಳಿಸಲಿದ್ದು, ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭೂಸ್ವಾಧೀನ ಮಸೂದೆ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ರೈತರು ನೀಡುವ ಭೂಮಿಯನ್ನು ದೇಶದ ಪ್ರಗತಿಗಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಭೂ ಸ್ವಾಧೀನ ಮಸೂದೆ ಬಗ್ಗೆ ಹಲವು ಗೊಂದಲಗಳನ್ನು ಸೃಷ್ಟಿಯಾಗುತ್ತಿದ್ದು, ಇದಕ್ಕೆ ತೆರೆ ಎಳೆಯಲು ಮತ್ತು ರೈತರಿಗಾಗುವ ಅನುಕೂಲಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಮುಂದಾಗಲಿದ್ದಾರೆ.
ರೈತರು ತಾವು ನೀಡುವ ಭೂವಿಗೆ ತಕ್ಕ ಬೆಲೆ ಕೊಟ್ಟು ಹಣ ಸಂದಾಯವಾದ ಮೇಲೆಯೇ ಅದನ್ನು ವಶಕ್ಕೆ ಪಡೆಯಲಾಗುವುದು. ಜತೆಗೆ ಪಾರದರ್ಶಕ ವ್ಯವಹಾರಗಳು ಕೂಡ ನಡೆಯಲಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.