ನವದೆಹಲಿ : ಆಮ್ ಆದ್ಮಿ ಪಕ್ಷದ ಪ್ರಮುಖ ಹುದ್ದೆಗಳಿಂದ ವಜಾಗೊಂಡಿರುವ ಬಂಡುಕೋರ ನಾಯಕರಾದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರು ಸ್ವರಾಜ್ ಸಂವಾದ' ಹೆಸರಲ್ಲಿ ಸಮಾನ ಮನಸ್ಕರ ಸಭೆ ಕರೆದಿದ್ದಾರೆ. ಇದರ ಬೆನ್ನಲ್ಲೇ, ಈ ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಆಪ್ ಗುಡುಗಿದೆ.
ಆಮ್ ಆದ್ಮಿ ಪಕ್ಷದ ತಿಮಾರ್ ಪುರ ಕ್ಷೇತ್ರದ ಶಾಸಕ ಪಂಕಜ್ ಪುಷ್ಕರ್, ಸಮಾಜ ಸೇವಕಿ ಮೇಧಾ ಪಾಟ್ಕರ್, ಹೋರಾಟಗಾರ್ತಿ ಅರುಣಾ ರಾಯ್, ಬುಡಕಟ್ಟು ಹೋರಾಟಗಾರ್ತಿ ಸೋನಿ ಸೋರಿ ಹಾಗೂ ವಿವಿಧ ರಾಜ್ಯಗಳ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಆಪ್ ಟಿಕೆಟ್ ಮೇಲೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ 100 ಮಂದಿ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಬಂಡುಕೋರರು ಹೇಳಿಕೊಳ್ಳುತ್ತಿದ್ದಾರೆ.
ಇದರ ಬೆನ್ನಲ್ಲೇ ಆಪ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ ಸಿಂಗ್ ಅವರು ಎಚ್ಚರಿಕೆಯೊಂದನ್ನು ನೀಡಿದ್ದು, ಸ್ವರಾಜ್ ಸಂವಾದ ಪಕ್ಷದ ಕಾರ್ಯಕ್ರಮವಲ್ಲ. ಅದರಲ್ಲಿ ಭಾಗವಹಿಸಿದವರ ವಿರುದ್ಧ ರಾಜಕೀಯ ವ್ಯವಹಾರಗಳ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.