ಹ್ಯಾನೋವರ್ : ಜರ್ಮನಿಗರೇ ಭಾರತದಲ್ಲಿ ಹೂಡಿಕೆ ಮಾಡಿ. ಹೂಡಿಕೆ ಮಾಡಲು ಪ್ರಸಕ್ತ ವಾತಾವರಣವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜರ್ಮನ್ ಉದ್ದಿಮೆದಾರರಿಗೆ ಆಹ್ವಾನ ನೀಡಿದ್ದಾರೆ.
ಹ್ಯಾನೋವರ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ, ಇಂಡೋ-ಜರ್ಮನ್ ವ್ಯಾಪಾರಿ ಮೇಳದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಇಂಡಿಯಾ ಪೆವಿಲಿಯನ್ ಉದ್ಘಾಟಿಸಿ ಮೇಳವನ್ನು ಉದ್ದೇಶಿಸಿ ಮಾತನಾಡಿದ ಅವರು. ಇಡೀ ಜಗತ್ತಿನ ಚಿತ್ತ ಈಗ ಭಾರತದತ್ತ ನೆಟ್ಟಿದೆ. ಹೀಗಾಗಿ ಜರ್ಮನಿಗರೇ ಭಾರತದಲ್ಲಿ ಹೂಡಿಕೆ ಮಾಡಿ. ಹೂಡಿಕೆ ಮಾಡಲು ಪ್ರಶಸ್ತ ವಾತಾವರಣ ಇದೆ ಎಂದರು. ಅಲ್ಲದೆ ನಮ್ಮನ್ನು ಈ ಮೇಳೆದಲ್ಲಿ ಜೊತೆಗಾರರನ್ನಾಗಿ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಆದ್ಯತಾ ವಲಯಗಳನ್ನು ಗುರುತಿಸಿ ಅದರಂತೆ ಕೆಲಸ ಮಾಡಲು ಮುಂದಾಗಿದ್ದೇವೆ. ಹಣಕಾಸು ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಜರ್ಮನಿ ಪಾಲುದಾರನಾಗಬೇಕು. ಅದಕ್ಕಾಗಿ ಇಲ್ಲಿನ ತಾಂತ್ರಿಕತೆ ಮತ್ತು ಕೌಶಲ್ಯ ನಮ್ಮಲ್ಲಿಗೆ ಬರಬೇಕು ಎಂದು ಹೇಳಿದರು.
ಜಾಗತಿಕ ಅರ್ಥವ್ಯವಸ್ಥೆಗೆ ಅನುಗುಣವಾಗುವಂತೆ ನಮ್ಮ ದೇಶದ ಯುವಕರಿಗೆ ವಿದ್ಯಾಭ್ಯಾಸದ ಜತೆಗೆ ಕೌಶಲ್ಯ ತರಬೇತಿಯನ್ನೂ ನೀಡಬೇಕು. ಅದಕ್ಕಾಗಿ ಬೇಕಾಗಿರುವ ವ್ಯವಸ್ಥೆಗಳನ್ನು ಹೊಂದಬೇಕಾಗಿದೆ. ಸರಕು ಮತ್ತು ಸೇವಾ ತೆರಿಗೆ ಹಲವು ವರ್ಷಗಳ ಹಿಂದೆಯೇ ಜಾರಿಯಾಗಬೇಕಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಅದರ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಹಣಕಾಸು ವರ್ಷದಿಂದ ಅನುಷ್ಠಾನಕ್ಕೆ ಬರಲಿದೆ ಎಂದರು.
ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕ್ಲಿಷ್ಟ ನಿಯಮಗಳನ್ನು ಮತ್ತಷ್ಟು ಸರಳಗೊಳಿಸುತ್ತಿದ್ದೇವೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಅನುಮೋದನೆ ನೀಡಿ ನಂಬುಗೆಯ ವಾತಾವಾರಣ ಸೃಜಿಸಲು ಪಣ ತೊಟ್ಟಿದ್ದೇವೆ. ಭಾರತ ವಿಶ್ವ ಆರ್ಥಿಕ ಭೂಪಟದಲ್ಲಿ ಸದೃಢವಾದ ಸ್ಥಾನ ಪಡಕೊಳ್ಳಬೇಕೆಂದು ಇಚ್ಛಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ಈ ವ್ಯಾಪಾರಿ ಮೇಳದಲ್ಲಿ ಸುಮಾರು 400ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಹಾಗೂ 300ಕ್ಕೂ ಹೆಚ್ಚು ಜರ್ಮನ್ ಕಂಪನಿಗಳು ಭಾಗಿಯಾಗಿವೆ. ಅಲ್ಲದೆ 120ಕ್ಕೂ ಹೆಚ್ಚು ಭಾರತದ ಉದ್ದಿಮೆದಾರರು ಭಾಗವಹಿಸಿದ್ದಾರೆ.