BW News Bureau : ಬಿಬಿಎಂಪಿಯನ್ನು ಮೂರು ವಿಭಾಗಗಳಾಗಿ ವಿಭಜಿಸುವ ಸುಗ್ರೀವಾಜ್ಞೆ ಪ್ರಸ್ತಾಪದಲ್ಲಿ ಹಿನ್ನಡೆ ಅನುಭವಿಸಿರುವ ರಾಜ್ಯ ಸರ್ಕಾರ, ಚುನಾವಣೆಯನ್ನು ಮುಂದೂಡುವ `ಮೇಲ್ಮನವಿ ಅಸ್ತ್ರ'ದತ್ತ ಮುಖಮಾಡಿದೆ. ಬಿಬಿಎಂಪಿ ಚುನಾವಣೆಯ ಭವಿಷ್ಯವನ್ನು ಹೈಕೋರ್ಟ್ ಸೋಮವಾರ ನಿರ್ಧರಿಸಲಿದೆ.
ಮೇ 30ರೊಳಗೆ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್, ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಸರ್ಕಾರ ಏ.13ಕ್ಕೆ ವಾರ್ಡ್ ಮೀಸಲು ಪಟ್ಟಿ ನೀಡದಿದ್ದರೆ ಹಿಂದಿನ ಮೀಸಲಿನಂತೆಯೇ ಚುನಾವಣೆ ನಡೆಸಬೇಕು ಎಂದೂ ತಾಕೀತು ಮಾಡಿದೆ.
ಇದರಂತೆ ಚುನಾವಣೆ ಆಯೋಗ ಚುನಾವಣೆ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದ್ದು, ವೀಕ್ಷಕರನ್ನೂ ನೇಮಿಸಿದೆ.ಸರ್ಕಾರ ಮೀಸಲು ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆಯನ್ನೂ ನಡೆಸಿದೆ. ಏತನ್ಮಧ್ಯೆ, ಹೈಕೋರ್ಟ್ ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮನವಿಯನ್ನೂ ಸಲ್ಲಿಸಿದೆ.
ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿ, ಸರ್ಕಾರ ಬಿಬಿಎಂಪಿಯನ್ನು ಮೂರು ಭಾಗ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಸದ್ಯದಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ. ಆದ್ದರಿಂದ 198 ವಾರ್ಡ್ ಗಳಿಗೆ ಚುನಾವಣೆ ನಡೆಸಬೇಕೆಂಬ ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದೆ. ಈ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ. ಈ ನಡುವೆ ರಾಜ್ಯಪಾಲರು ಸುಗ್ರೀವಾಜ್ಞೆ ಪ್ರಸ್ತಾಪವನ್ನು ಹಲವು ವಿವರಣೆಗಳನ್ನು ಕೇಳಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ, ಹೈಕೋರ್ಟ್ ವಿಭಾಗೀಯ ಪೀಠದ ಆದೇಶದಲ್ಲಿ ಚುನಾವಣೆ ಭವಿಷ್ಯ ಅಡಗಿದೆ.
ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದಂತೆ ಸರ್ಕಾರ ಮೀಸಲು ಪಟ್ಟಿ ಪ್ರಕಟಿಸುವ ಅಂತಿಮ ಹಂತದಲ್ಲಿದೆ. ಏ.13ರೊಳಗೆ ಅಂತಿಮ ಮೀಸಲು ಪಟ್ಟಿ ಆಯೋಗಕ್ಕೆ ನೀಡಬೇಕು. ಹೀಗಾಗಿ ಸರ್ಕಾರ ಏ.4ರಂದು 198 ವಾರ್ಡ್ ಗಳಿಗೆ ಮೀಸಲು ಪಟ್ಟಿಯನ್ನು ಪ್ರಕಟಿಸಿ, ಸಾರ್ವಜನಿಕರಿಗೆ ಏಳು ದಿನ ಆಕ್ಷೇಪಣೆಗೆ ಅವಕಾಶ ಕಲ್ಪಿಸಿತ್ತು. ಈ ಮೀಸಲು ಪಟ್ಟಿಗೆ 700ಕ್ಕೂ ಹೆಚ್ಚು ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಇದರೊಂದಿಗೆ ಮೇಯರ್ ಸೇರಿದಂತೆ ಬಿಬಿಎಂಪಿಯ ಆಡಳಿತ ಮತ್ತು ಪ್ರತಿಪಕ್ಷದ ಅನೇಕ ಸದಸ್ಯರು ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಮೀಸಲು ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಅದೆಲ್ಲವನ್ನು ಪರಿಶೀಲಿಸಿದ್ದಾರೆ. ಹಾಗೆಯೇ ಅನೇಕ ವಾರ್ಡ್ಗಳ ಮೀಸಲು ಪಟ್ಟಿಯನ್ನು ಮರುನಿಗದಿ ಮಾಡಿದ್ದಾರೆ. ಪಟ್ಟಿಯ ಅಂತಿಮ ಅಧಿಸೂಚನೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಅನುಮತಿಯಷ್ಟೇ ಬಾಕಿ ಇದ್ದು, ಇದಕ್ಕೆ ಒಪ್ಪಿಗೆ ಸಿಕ್ಕರೆ ಸೋಮವಾರ ಮೀಸಲು ಪಟ್ಟಿ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಗ್ರೀವಾಜ್ಞೆ ಪ್ರಸ್ತಾಪಕ್ಕೆ ಸಾಕಷ್ಟು ವಿವರಣೆಯನ್ನು ಕೇಳಿರುವ ರಾಜ್ಯಪಾಲರು ಅದನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಈ ಸಂಬಂಧ ಭಾನುವಾರ ತುರ್ತಾಗಿ ನಗರಕ್ಕೆ ಸಂಬಂಧಿಸಿದ ಹಾಗೂ ಆಪ್ತ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಹಾದಿಯ ಬಗ್ಗೆ ಸೋಮವಾರ ಹೈಕೋರ್ಟ್ ನೀಡುವ ತೀರ್ಪಿನ ನಂತರ ತೀರ್ಮಾನಿಸಲು ನಿರ್ಧರಿಸಿದ್ದಾರೆ.