ರಾಯ್ ಪುರ: : ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆಯ ಏಳು ಪೊಲೀಸರನ್ನು ಹತ್ಯೆಗೈದಿದ್ದ ನಕ್ಸಲರು ತಮ್ಮ ಅಟ್ಟಹಾಸ ಮುಂದುವರಿಸಿದ್ದು, ಇಲ್ಲಿನ ಕಂಕೇರ್ ಜಿಲ್ಲೆಯಲ್ಲಿ 17 ಕಬ್ಬಿಣದ ಅದಿರಿನ ಲಾರಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಕೋರಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರ್ಬಾ ಸ್ಪುರ್ ಕಬ್ಬಿಣದ ಅದಿರು ಗಣಿಗಾರಿಕೆ ಪ್ರದೇಶದ ಮೇಲೆ ದಾಳಿ ನಡೆಸಿದ ಶಸ್ತ್ರ ಸಜ್ಜಿತ ನಕ್ಸಲರ ಗುಂಪು, ಕಾರ್ಮಿಕರನ್ನು ಬೆದರಿಸಿ, ಸ್ಥಳದಲ್ಲಿದ್ದ ಅದಿರು ತುಂಬಿದ್ದ 17 ಲಾರಿಗಳಿಗೆ ಬೆಂಕಿ ಹಚ್ಚಿ ಕಾಡಿಗೆ ಪರಾರಿಯಾಗಿದೆ. ಈ ವೇಳೆ ಲಾರಿಯಲ್ಲಿ ಯಾರೂ ಇಲ್ಲದ ಕಾರಣ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಶನಿವಾರ ನಕ್ಸಲರ ಗುಂಡಿಗೆ ಬಲಿಯಾಗಿದ್ದ ವಿಶೇಷ ಕಾರ್ಯಪಡೆಯ 7 ಪೊಲೀಸರ ಶವಗಳು ಪತ್ತೆಯಾಗಿವೆ. ಶನಿವಾರ ಘಟನೆ ನಡೆದ ಬಳಿಕ ಮತ್ತು ರವಿವಾರ ಬೆಳಗ್ಗೆಯಿಡೀ ಪ್ರತಿಕೂಲ ವಾತಾವರಣ ಇದ್ದ ಕಾರಣ, ಮೃತ ಪೊಲೀಸರ ಶವ ಪತ್ತೆಗೆ ಭಾರೀ ಅಡ್ಡಿ ಎದುರಾಗಿತ್ತು. ಇದರ ಹೊರತಾಗಿಯೂ ಮಧ್ಯಾಹ್ನದ ವೇಳೆಗೆ ಎಲ್ಲ 7 ಪೊಲೀಸರ ಶವಗಳನ್ನು ಪತ್ತೆಹಚ್ಚಲಾಗಿದೆ. ಮೃತದೇಹಗಳನ್ನು ಕಂಕೇರ್ ಲಂಕಾ ಕ್ಯಾಂಪ್ ಗೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ಕಾಪ್ಟರ್ ಮೂಲಕ ಜಗದಾಳ್ ಪುರ ಜಿಲ್ಲಾ ಕೇಂದ್ರ ಕಚೇರಿಗೆ ತೆಗೆದು ಕೊಂಡು ಹೋಗಲಾಯಿತು. ಅಲ್ಲಿ ಮೃತ ಪೊಲೀಸರಿಗೆ ಸರಕಾರಿ ಗೌರವ ಸಲ್ಲಿಸಲಾಯಿತು.