ಟ್ಯುನೀಸಿಯಾ : ಇತ್ತೀಚೆಗೆ ಇಸ್ಲಾಮಿಸ್ಟ್ ಉಗ್ರಗಾಮಿಗಳ ಅಟ್ಟಹಾಸಕ್ಕೆ ತುತ್ತಾಗಿ 38 ಅಮಾಯಕ ವಿದೇಶೀಯರು ಹತ್ಯೆಯಾದ ಹಿನ್ನಲೆಯಲ್ಲಿ ಅಧ್ಯಕ್ಷ ಬೆಜಿ ಕೈಡ್ ಎಸ್ಸೆಬ್ಸಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಉಗ್ರಗಾಮಿಗಳು ಕಳೆದ ತಿಂಗಳು ಎಸಗಿದ ಈ ರಾಕ್ಷಸೀ ಕೃತ್ಯವು ರಾಷ್ಟ್ರವನ್ನು ‘ಸಮರ ಸ್ಥಿತಿ’ಯಲ್ಲಿ ತಂದು ನಿಲ್ಲಿಸಿದೆ ಎಂದು ಟ್ಯುನೀಸಿಯಾದ ಅಧ್ಯಕ್ಷರು ಶನಿವಾರ ಪ್ರಕಟಿಸಿದ್ದಾರೆ.
ಟ್ಯುನಿಸ್ನ ಬಾರ್ಡೆ ಮ್ಯೂಸಿಯಂನಲ್ಲಿ ನಡೆದ ಹತ್ಯಾಕಾಂಡದ ನೆನಪು ಮಾಸುವ ಮುನ್ನವೇ ನಡೆದ ಕರಾವಳಿ ರಿಸಾರ್ಟ್ ಶೂಟೌಟ್ ಪ್ರಕರಣವು ಉತ್ತರ ಆಫ್ರಿಕದ ಈ ರಾಷ್ಟ್ರಕ್ಕೆ ಆಘಾತ ಉಂಟುಮಾಡಿದೆ.
ಟ್ಯುನೀಸಿಯಾದ ತುರ್ತು ಪರಿಸ್ಥಿತಿಯು ಸರ್ಕಾರಕ್ಕೆ ಹೆಚ್ಚಿನ ಕಾರ್ಯನಿರ್ವಹಣಾ ಅಧಿಕಾರವನ್ನು ನೀಡುತ್ತದೆ. ಸೇನೆ ಮತ್ತು ಪೊಲೀಸ್ ಇಲಾಖೆಗಳಿಗೆ ಹೆಚ್ಚಿನ ಅಧಿಕಾರದೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಒದಗಿಸುತ್ತದೆ. ಜೊತೆಗೆ ಜನರ ಗುಂಪುಗಳ ಜೊತೆ ವ್ಯವಹರಿಸುವಲ್ಲಿ ಮತ್ತು ಬಂಧಿಸುವಲ್ಲಿ, ಜನರ ಕೆಲವು ಹಕ್ಕುಗಳನ್ನು ನಿರ್ಬಂಧಿಸುತ್ತದೆ.
ಜನರು ಸಾರ್ವಜನಿಕವಾಗಿ ಗುಂಪು ಸೇರದಂತೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ದೇಶಾದ್ಯಂತ ರಕ್ಷಣಾ ವ್ಯವಸ್ತೆಯನ್ನು ಬಲಪಡಿಸಲಾಗಿದೆ.