ಬೆಂಗಳೂರು : ಜಾತಿ ಗಣತಿ ಹೆಸರಲ್ಲಿ ಸಮಾಜ ಒಡೆಯಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅದೇ ತಿರುಗುಬಾಣ ಆಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಾತಿಯ ಹೆಸರಿನಲ್ಲಿ ಗಣತಿ ಕಾರ್ಯ ಆರಂಭಿಸಿ ಸಮಾಜವನ್ನು ಒಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಬಿಬಿಎಂಪಿಯನ್ನು ವಿಭಜಿಸಿ ಬೆಂಗಳೂರು ಒಡೆಯಲು ಮುಂದಾಗುತ್ತಿದ್ದಾರೆ. ಇದರೊಂದಿಗೆ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಹೆಚ್ಚುತ್ತಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ನಿರ್ಮೂಲನೆಯಾಗಬೇಕು. ಆದರೆ ಜಾತ್ಯಾತೀತ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಒಕ್ಕಲಿಗರ ಸಮುದಾಯಕ್ಕೆ ಏನನ್ನೂ ಮಾಡಲಿಲ್ಲ. ಏಕೆಂದರೆ ಆಗ ನಾನು ಆರು ಕೋಟಿ ಕನ್ನಡಿಗರ ಪ್ರತಿನಿಧಿಯಾಗಿದ್ದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನವರು ಜಾತ್ಯಾತೀತ ಆಡಳಿತ ನಡೆಸುತ್ತೇವೆಂದು ಜಾತಿ ಹೆಸರಿನಲ್ಲಿ ಆಡಳಿತ ನಡೆಸಬೇಡಿ ಎಂದು ಎಚ್ಚರಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ 93 ಜನ ಶಾಸಕರು ಸಹಿ ಹಾಕುವ ದುಃಸ್ಸಾಹಸ ಮಾಡಿದ್ದಾರೆ ಎಂದ ಅವರು, ಉತ್ತರ ಕರ್ನಾಟಕದ ಎಷ್ಟೋ ಮಂದಿ ಮಂತ್ರಿಗಳಾಗಿದ್ದಾರೆ, ಶಾಸಕರಾಗಿದ್ದಾರೆ. ಆದರೆ ಅವರೇನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.