ಬೆಂಗಳೂರು : ಜಾತಿ ಜನಗಣತಿ ವಿರೋಧಿಸುವವರು ಕೊಳಕು ಮನಸ್ಸಿನ ಜಾತಿವಾದಿಗಳು. ವಾಸ್ತವವಾಗಿ ಜಾತಿ ಗಣತಿ ಎಂಬುದು ಜಾತಿಗಳನ್ನು ಒಟ್ಟುಗೂಡಿಸುವ ಸಾಮಾಜಿಕ ನ್ಯಾಯದ ಕೆಲಸವೇ ಹೊರತು ಜಾತಿ ಒಡೆಯುವ ಕೆಲಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಜಾತಿ ಗಣತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜಾತಿ ಗಣತಿ ಬಗ್ಗೆ ಕೆಲವರಿಗೆ ಆತಂಕವಿದೆ. ಅದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಜನಸಂಖ್ಯೆ ಆಧಾರದ ಮೇಲೆ ಪ್ರತಿಯೊಂದು ಸಮುದಾಯಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸುವುದು ಜಾತಿ ಜನಗಣತಿ ಹಿಂದಿರುವ ಉದ್ದೇಶ. 1931ರಲ್ಲಿ ಜಾತಿ ಗಣತಿ ನಡೆದ ಮೇಲೆ ಇದುವರೆಗೂ ಆಗಿಲ್ಲ. ಯಾರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ತಿಳಿದುಕೊಂಡರೆ ತಾನೇ ಕಾರ್ಯಕ್ರಮ ರೂಪಿಸಲು ಸಾಧ್ಯ ಎಂದರು.
ಶೋಷಿತರ ವಿಚಾರದಲ್ಲಿ ಯಾರು ಏನೇ ಹೇಳಿದರೂ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿರುತ್ತದೆ. ಎಂತಹುದೇ ಪರಿಸ್ಥಿತಿಯಲ್ಲೂ ಈ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ರಾಜ್ಯದಲ್ಲಿ ವಸತಿ ರಹಿತ ದಲಿತರು ಇರಬಾರದು ಎಂಬ ಗುರಿ ಸರ್ಕಾರದ್ದು. ಹೀಗಾಗಿ, 1.5 ಲಕ್ಷ ಮನೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ವರ್ಷ ಈ ಸಂಖ್ಯೆ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ ಎಷ್ಟು ವಿದ್ಯಾರ್ಥಿನಿಲಯ ಬೇಕೋ ಅಷ್ಟೂ ನಿರ್ಮಾಣ ಮಾಡಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಸೂಚಿಸಿದ್ದೇನೆ. ಒಂದೊಮ್ಮೆ ಹಾಸ್ಟೆಲ್ ನಲ್ಲಿ ಅವಕಾಶ ಸಿಗದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಮೂಲಕ ಮಾಸಿಕ ಭತ್ಯೆ ನೀಡಿ ಎಂದೂ ತಿಳಿಸಲಾಗಿದೆ ಎಂದು ತಿಳಿಸಿದರು.