ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ "ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ' ಶನಿವಾರದಿಂದ ಪ್ರಾರಂಭವಾಗಲಿದೆ.
ಜಾತಿವಾರು ಜನಗಣತಿ ಎಂದೇ ಬಿಂಬಿತವಾಗಿರುವ ಈ ಸಮೀಕ್ಷೆ ಏಪ್ರಿಲ್ 30 ರವರೆಗೆ ನಡೆಯಲಿದ್ದು, ರಾಜ್ಯದಲ್ಲಿರುವ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಔದ್ಯೋಗಿಕ-ಆರ್ಥಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಅಂಶಗಳ ಮೇಲೆ ನಿಖರವಾದ ಮಾಹಿತಿ ಸಂಗ್ರಹಿಸಲಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯಲಿರುವ ಸಮೀಕ್ಷೆಗೆ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ತಾಲೂಕು ಮಟ್ಟದಲ್ಲಿ ಶಾಸಕರು ಅಥವಾ ತಹಸೀಲ್ದಾರ್ ಹಸಿರು ನಿಶಾನೆ ತೋರಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿ-ಧಾರವಾಡ ಪ್ರವಾಸದಲ್ಲಿದ್ದು, ಅಲ್ಲಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಚಿತ್ರದುರ್ಗದಲ್ಲಿ ನಿಶಾನೆ ತೋರಲಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕೋರಮಂಗಲದಲ್ಲಿ ಚಾಲನೆ ನೀಡಲಿದ್ದಾರೆ.
ಈಗಾಗಲೇ ಗಣತಿ ಕಾರ್ಯಕ್ಕೆ ಅಗತ್ಯವಾದ ಲೇಖನ ಸಾಮಗ್ರಿಗಳ ಜತೆಗೆ 55 ಕಲಂಗಳುಳ್ಳ ನಮೂನೆ ಮತ್ತು ಕೈಪಿಡಿಗಳನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ಗಣತಿದಾರರಿಗೆ ತರಬೇತಿ ಸಹ ನೀಡಿ ಸಜ್ಜುಗೊಳಿಸಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಸಂಚಾರಿ ವಾಹನಗಳ ಮೂಲಕ ಪ್ರಚಾರಾಂದೋಲನ ಸಹ ಕೈಗೊಳ್ಳಲಾಗಿದೆ. ಗಣತಿದಾರರ ಮಾಹಿತಿ ಸಂಗ್ರಹವಾದ ನಂತರ ದತ್ತಾಂಶ ಶೇಖರಣೆ ಹಾಗೂ ದಾಖಲೀಕರಣ ಕಾರ್ಯವನ್ನು ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ಸಂಸ್ಥೆಗೆ ವಹಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿಗೆ ಮುಖ್ಯ ಆಧಾರ ಜಾತಿಯೇ ಆಗಿರುತ್ತದೆ. 1931ರ ಜಾತಿ ಗಣತಿ ನಂತರ ಯಾವುದೇ ಜನಗಣತಿ ದಾಖಲೆಗಳಿಂದ ಜಾತಿವಾರು ಜನಸಂಖ್ಯೆಯ ಖಚಿತ ಅಂಕಿ-ಅಂಶ ದೊರೆಯುತ್ತಿಲ್ಲ. ಆಯಾ ಜಾತಿ ಸಂಘಟನೆಗಳು ಅಂದಾಜು ಮೂಲಕ ಇಂತಿಷ್ಟು ಜನಸಂಖ್ಯೆ ಇದ್ದೇವೆ ಎಂದು ನೀಡುವ ಮಾಹಿತಿಯಷ್ಟೇ ಇದೆ. ಇದರಿಂದಾಗಿ ಸರ್ಕಾರದ ಸೌಲಭ್ಯ ಒದಗಿಸುವುದು ಕಷ್ಟವಾಗುತ್ತಿದೆ. ಕೆಲವೊಮ್ಮೆ ಅನರ್ಹರು ಸುಳ್ಳು ಜಾತಿ ದೃಢೀಕರಣ ಪತ್ರದೊಂದಿಗೆ ಮೀಸಲಾತಿಯ ದುರ್ಬಳಕೆ ಮಾಡುತ್ತಿರುವ ಪ್ರಕರಣಗಳೂ ಇವೆ. ಹೀಗಾಗಿ, ಸರ್ಕಾರ ಎಲ್ಲ ಜಾತಿ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಮನೆ ಮನೆ ಸಮೀಕ್ಷೆ ನಡೆಸಲು ಆದೇಶಿಸಿದೆ.