ನವದೆಹಲಿ : 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತನಗೆ ನೀಡಲಾಗಿರುವ ಮರಣ ದಂಡನೆಯ ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಯಾಕೂಬ್ ಅಬ್ದುಲ್ ರಝಾಕ್ ಮೆಮೋನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ನಿಟ್ಟಿನಲ್ಲಿ ಮೆಮೋಮ್ ಗೆ ಯಾವುದೇ ಹೊತ್ತಿನಲ್ಲಿ ಗಲ್ಲುಶಿಕ್ಷೆ ವಿಧಿಸಬಹುದಾಗಿದೆ.
ಜಸ್ಟಿಸ್ ಎ.ಆರ್.ದವೆ ನೇತೃತ್ವದ ತ್ರಿಸದಸ್ಯ ಪೀಠ ಈ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಏಕೈಕ ಅಪರಾಧಿ ಮೆಮೋನ್ನ ಪುನರ್ ಪರಿಶೀಲನಾ ಅರ್ಜಿಯನ್ನು ವಜಾ ಮಾಡಿತು.
2014ರ ಜೂನ್ 2ರಂದು ಸುಪ್ರೀಂ ಕೋರ್ಟ್, ಮೆಮೋನ್ ಗೆ ಗಲ್ಲು ಶಿಕ್ಷೆ ಜಾರಿಯಾಗುವುದನ್ನು ತಡೆ ಹಿಡಿದಿತ್ತು.
ಇದಕ್ಕೂ ಮೊದಲು, 2013ರ ಮಾರ್ಚ್ 21ರಂದು ಸುಪ್ರೀಂ ಕೋರ್ಟ್ ಮೆಮೋನ್ ಗೆ ನೀಡಲಾಗಿದ್ದ ಮರಣ ದಂಡನೆಯ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ಈ ಪ್ರಕರಣದ ಇತರ ಹತ್ತು ಅಪರಾಧಿಗಳಿಗೆ ಟಾಡಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆಯ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು. ಈ 10 ಅಪರಾಧಿಗಳು ಮುಂಬೈಯ ವಿವಿಧ ಸ್ಥಳಗಳಲ್ಲಿ ಆರ್.ಡಿ.ಎಕ್ಸ್ ತುಂಬಿದ ವಾಹನಗಳನ್ನು ಇರಿಸಿದ್ದರು. ಆದರೆ ಸರಣಿ ಬಾಂಬ್ ಸ್ಫೋಟ ಕೃತ್ಯದಲ್ಲಿ ಈ 10 ಅಪರಾಧಿಗಳ ಪಾಲ್ಗೊಳ್ಳುವಿಕೆಯನ್ನು ನ್ಯಾಯಾಲಯವು ಮೆಮೋನ್ ವಹಿಸಿದ್ದ ಮುಖ್ಯ ಪಾತ್ರಕ್ಕಿಂತ ಭಿನ್ನವಾಗಿ ಪರಿಗಣಿಸಿ ಅವರ ಮರಣ ದಂಡನೆಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.