ಪಣಜಿ : 'ಇಂಡಿಯನ್ ಮುಜಾಹಿದ್ದೀನ್'(ಐಎಂ) ಉಗ್ರ ಸಂಘಟನೆಯಲ್ಲ ಎಂದು ಗೋವಾ ಕಾಂಗ್ರೆಸ್ ಮುಖಂಡ ಖುರ್ಷಿದ್ ಅಹ್ಮದ್ ಸಯ್ಯದ್ ಸಮರ್ಥಿಸಿಕೊಂಡಿದ್ದಾರೆ.
ಗೋವಾ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್, ವಿಶ್ವದ ಹಲವು ಭಾಗದಲ್ಲಿ ಮುಸ್ಲಿಮ್ ಉಗ್ರರಿದ್ದಾರೆ. ಆದರೆ ಭಾರತೀಯ ಮುಸ್ಲಿಮರು ಎಂದಿಗೂ ಭಯೋತ್ಪಾದಕರಲ್ಲ, ಆದ್ದರಿಂದ ಭಾರತದ ಸಂಘಟನೆಯೇ ಆಗಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ ಇಸ್ಲಾಮ್ ನ ಧರ್ಮಾಭಿಮಾನಿ ಸಂಘಟನೆಯಾಗಿದೆ ಎಂಬುದು ಖುರ್ಷಿದ್ ಅಹ್ಮದ್ ಸಯ್ಯದ್ ಅಭಿಪ್ರಾಯವಾಗಿದೆ. ಆದರೆ ಇದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಯುಪಿಎ ಸರ್ಕಾರ 2010ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು. ಅಲ್ಲದೇ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ್ ವಿರುದ್ಧ ಭಯೋತ್ಪಾದನೆ ಮಾಡಿರುವ ಆರೋಪಗಳಿವೆ.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಭಾರತ ಮತ್ತು ಅಮೆರಿಕ ಸರ್ಕಾರ ಅಧಿಕೃತವಾಗಿಯೇ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು.
ಪುಣೆ (2010), ವಾರಣಾಸಿ (2010), ಮುಂಬೈ ಸರಣಿ ಸ್ಫೋಟ (2011) ಸೇರಿದಂತೆ ಸುಮಾರು ಹತ್ತು ದಾಳಿಗಳನ್ನು ನಡೆಸಿದ್ದರೂ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಅಲ್ಲ ಎಂದು ಹೇಗೆ ಹೇಳುತ್ತೀರಿ ಎಂದು ಸೈಯದ್ ಅವರನ್ನು ಸುದ್ದಿಗಾರರು ಮರು ಪ್ರಶ್ನಿಸಿದಾಗ, ಬಹುಶ: ಆ ದಾಳಿಗಳನ್ನು ಬೇರೆ ಸಂಘಟನೆಗಳು ಮಾಡಿರಬೇಕು. ದಾಳಿ ನಡೆಸಿದ ಮಾತ್ರಕ್ಕೆ ಅದರರ್ಥ ಅವರು ಭಯೋತ್ಪಾದಕರೆಂದಲ್ಲ ಎಂದು ಹೇಳಿದ್ದಾರೆ.