ನವದೆಹಲಿ : ಬಿಜೆಪಿ ಯ 35ನೇ ಸಂಸ್ಥಾಪನಾ ದಿನಾಚರಣೆಗೆ ಪಕ್ಷದ ಸಂಸ್ಥಾಪಕರಲ್ಲಿ ಪ್ರಮುಖರಾಗಿರುವ ಎಲ್.ಕೆ.ಅಡ್ವಾಣಿ ಅವರಿಗೆ ಸೂಕ್ತ ರೀತಿಯಲ್ಲಿ ಆಹ್ವಾನ ನೀಡದೇ ಇರುವ ಸಂಗತಿ ಬೆಳಕಿಗೆ ಬಂದಿದೆ.
1980ರ ಏ.6ರಂದು ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರಂತಹ ನಾಯಕರ ನೇತೃತ್ವದಲ್ಲಿ ಬಿಜೆಪಿ ಸ್ಥಾಪನೆಯಾಗಿತ್ತು. ಅದರ 35ನೇ ಸಂಸ್ಥಾಪನಾ ದಿನಾಚರಣೆಯನ್ನು ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿತ್ತು. ಪಕ್ಷಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲ್.ಕೆ.ಅಡ್ವಾಣಿ ಅವರಿಗೆ ಅಧಿಕೃತ ಆಹ್ವಾನವನ್ನೇ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಕಳುಹಿಸುವ ರೀತಿಯಲ್ಲಿ ಅಡ್ವಾಣಿ ಅವರಿಗೆ ಒಂದು ಎಸ್ಎಂಎಸ್ ರವಾನಿಸಲಾಗಿತ್ತು. ಇದರಿಂದ ಅಡ್ವಾಣಿ ಬೇಸರಗೊಂಡು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂದು ಹೇಳಲಾಗಿದೆ.
ಕಳೆದ ಶುಕ್ರವಾರ ಹಾಗೂ ಶನಿವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯುದ್ದಕ್ಕೂ ಅಡ್ವಾಣಿ ಅವರು ಮೌನವಹಿಸಿರುವುದು ಚರ್ಚೆಗೆ ಕಾರಣವಾಗಿತ್ತು. ಈ 35 ವರ್ಷಗಳ ಅವಧಿಯಲ್ಲಿ ತಾವು ಭಾಗಿಯಾದ ಎಲ್ಲ ರಾಷ್ಟ್ರೀಯ ಕಾರ್ಯಕಾರಿಣಿಗಳಲ್ಲೂ ಅಡ್ವಾಣಿ ಭಾಷಣ ಮಾಡುತ್ತಿದ್ದರು. ಆದರೆ ಬೆಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಈ ಸಂಪ್ರದಾಯ ಪಾಲನೆಯಾಗಲಿಲ್ಲ. ಇದರ ಬೆನ್ನಲ್ಲೇ ಅಡ್ವಾಣಿ ಅವರನ್ನು ಬಿಜೆಪಿ ಸಂಸ್ಥಾಪನಾ ದಿನಾಚರಣೆಯಿಂದ ದೂರವಿಟ್ಟಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ.
ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡುವುದಕ್ಕೆ ಪ್ರಮುಖವಾಗಿ ವಿರೋಧ ವ್ಯಕ್ತಪಡಿಸಿದ್ದ ಅಡ್ವಾಣಿ ಅವರನ್ನು ಮೋದಿ ಅವರು ಪ್ರಧಾನಿ ಗದ್ದುಗೆಗೇರಿದ ಎರಡೇ ತಿಂಗಳಲ್ಲಿ ಪಕ್ಷದ ಸಂಸದೀಯ ಮಂಡಳಿಯಿಂದ ಹೊರಗಿಡಲಾಗಿತ್ತು. ಮಾರ್ಗದರ್ಶಕ ಮಂಡಳಿ ರಚಿಸಿ ಅದರಲ್ಲಿ ಹುದ್ದೆ ನೀಡಲಾಗಿತ್ತು. ದೆಹಲಿ ಚುನಾವಣೆಯಲ್ಲಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವುದು, ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಜತೆ ಮೈತ್ರಿ ಮಾಡಿಕೊಳ್ಳುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಸೌಜನ್ಯಕ್ಕೂ ಅಡ್ವಾಣಿ ಅವರ "ಮಾರ್ಗದರ್ಶನ' ಪಡೆದಿರಲಿಲ್ಲ. ಹೀಗಾಗಿ ತಮ್ಮನ್ನು "ನಾಮಕೇವಾಸ್ತೆ ಮಾರ್ಗದರ್ಶಕ'ರನ್ನಾಗಿ ಮಾಡಲಾದ ಬಗ್ಗೆ ಹಿರಿಯ ನಾಯಕ ಬೇಸರಗೊಂಡಿದ್ದಾರೆ ಎನ್ನಲಾಗಿದೆ.