ಬೆಂಗಳೂರು : ಭೂ ಸ್ವಾಧೀನ ತಿದ್ದುಪಡಿ ಮಸೂದೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ಭೂಸ್ವಾಧೀನ ಕಾಯ್ದೆ ವಿರುದ್ಧ ಅನಗತ್ಯವಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೋರಾಟಕ್ಕೆ ಎದೆಗುಂದುವುದು ಬೇಡ. ರಾಜಕೀಯವಾಗಿ ಹೋರಾಟವನ್ನು ಎದುರಿಸೋಣ. ರಾಜಕೀಯವಾಗಿಯೇ ತಿರುಗೇಟು ನೀಡೋಣ ಎಂದು ಸಲಹೆ ನೀಡಿದರು.
2013ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆ ರೈತ ವಿರೋಧಿಯಾಗಿತ್ತು. ನಾವು ಅದಕ್ಕೆ ತಿದ್ದುಪಡಿ ತಂದು ರೈತ ಸ್ನೇಹಿಯಾಗಿ ಮಾಡಿದ್ದೇವೆ ಎಂದು ಹೇಳಿದರು.
ಬಿಜೆಪಿ ಜನಪರ ಯೋಜನೆಗಳ ಕುರಿತು ಪ್ರಚಾರ ಮಾಡುವ ಅಗತ್ಯವಿದೆ. ಯೋಜನೆಗಳ ಬಗ್ಗೆ ಸರ್ಕಾರ ಹಾಗೂ ಪಕ್ಷ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು.
ಮಾಧ್ಯಮಗಳಲ್ಲಿ ಬಂದಿರುವ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಮೂಲೆಗುಂಪು ವರದಿಗೆ ತೆರೆ ಎಳೆಯುವ ಯತ್ನ ಎಂಬಂತೆ ಪ್ರಧಾನಿ ಮೋದಿ, ಸಭೆಯಲ್ಲಿ ಅಡ್ವಾಣಿ ಪಕ್ಷಕ್ಕೆ ನೀಡಿರುವ ಕೊಡುಗೆ ಹಾಗೂ ಮಾರ್ಗದರ್ಶನದ ಬಗ್ಗೆ ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸಮಾರೋಪ ಭಾಷಣದೊಂದಿಗೆ ರಾಷ್ಟ್ರೀಯ ಕಾರ್ಯಕಾರಿಣಿಗೆ ಅಧಿಕೃತ ತೆರೆಬಿತ್ತು.