ಬೆಂಗಳೂರು : ಪೈಪ್ ಲೈನ್ ಮೂಲಕ ಅಡುಗೆ ಅನಿಲ (ಎಲ್ಪಿಜಿ) ಪೂರೈಕೆ ಮಾಡುವ ಬೆಂಗಳೂರು ಪೈಪ್ ಲೈನ್ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಭಾರತೀಯ ತೈಲ ಕಂಪನಿಗಳು ಹಮ್ಮಿಕೊಂಡಿದ್ದ ಎಲ್ಪಿಜಿ ಸಬ್ಸಿಡಿ ಬಿಟ್ಟು ಬಿಡು ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಪೈಪ್ ಲೈನ್ ಮೂಲಕ ಅನಿಲ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅನುಷ್ಟಾನಗೊಳಿಸುವ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ, ಬಿಬಿಎಂಪಿ, ತೈಲ ಕಂಪನಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಯೋಜನೆ ಅನುಷ್ಠಾನಗೊಳಿಸಲು ಅತಿ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದರು.
ಗೈಲ್ ಮೂಲಕ ಬೆಂಗಳೂರು ಪೈಪ್ ಕಲೆಕ್ಷನ್ ಅನುಷ್ಟಾನ ಮಾಡಲಾಗುವುದು. ಸ್ವಾತಂತ್ರ್ಯ ಬಂದ ಮೇಲೆ ದೇಶದಲ್ಲಿ 15 ಸಾವಿರ ಕಿಲೋ ಮೀಟರ್ ಮಾತ್ರ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಒದಗಿಸಲಾಗುತ್ತದೆ. 2019ರ ವೇಳೆಗೆ ಹೆಚ್ಚುವರಿಯಾಗಿ ಇನ್ನು 15 ಸಾವಿರ ಕಿ.ಮೀ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಬೆಂಗಳೂರು ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಗಮನ ಸೆಳೆದಿದೆ. ಇಲ್ಲಿನ ಉದ್ಯೋಗಿಗಳು, ಆರ್ಥಿಕವಾಗಿ ಸಬಲರಾಗಿರುವವರು, ಸಬ್ಸಿಡಿ ಗ್ಯಾಸ್ ಬಿಟ್ಟು ಕೊಡಬೇಕು. ಈ ಮೂಲಕ ದೇಶದ ದುರ್ಬಲ ವರ್ಗದ ಜನತೆಯ ಏಳಿಗೆಗೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.