ಕೊಲಂಬೋ : ನಮ್ಮ ಕರಾವಳಿ ಪ್ರದೇಶದಲ್ಲಿ ಭಾರತೀಯ ಮೀನುಗಾರರಿಗೆ ಮೀನುಗಾರಿಕೆ ನಡೆಸುವ ಅವಕಾಶ ಇಲ್ಲ. ಒಂದು ವೇಳೆ ದೇಶದ ಕರಾವಳಿ ಸರಹದ್ದು ಮೀರಿ ಒಳಪ್ರವೇಶಿಸಿದ ಹಡಗನ್ನು ವಶಕ್ಕೆ ತೆಗೆದುಕೊಳ್ಳುವಂತೆ ನೌಕಾಪಡೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ನಮ್ಮ ಕರಾವಳಿ ಪ್ರದೇಶದಲ್ಲಿ ಭಾರತೀಯರಿಗೆ ಮೀನುಗಾರಿಕೆಗೆ ಅವಕಾಶ ಇಲ್ಲ. ಹಾಗಾಗಿ ನಮ್ಮ ಸರಹದ್ದು ಮೀರಿ ಒಳಬಂದ ಹಡಗು ಅಥವಾ ಮೀನುಗಾರರನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದು ಲಂಕಾದ ಮತ್ಸೋದ್ಯಮ ಮತ್ತು ರಾಜಕೀಯ ನೇತಾರರ ನಿಯೋಗದ ಜೊತೆ ಮಾತನಾಡುತ್ತ ಭರವಸೆ ನೀಡಿದ್ದಾರೆ.
ಶ್ರೀಲಂಕಾದ ಕರಾವಳಿ ಭಾಗದಲ್ಲಿ ಭಾರತೀಯ ಮೀನುಗಾರರಿಗೆ ಮೀನುಗಾರಿಕೆಗೆ ಸರ್ಕಾರ ಅವಕಾಶ ಕೊಟ್ಟಿದೆ ಎಂದು ಶ್ರೀಲಂಕಾದ ವಿರೋಧ ಪಕ್ಷವಾದ ನ್ಯಾಷನಲ್ ಫ್ರೀಡಂ ಫ್ರಂಟ್ ಆರೋಪಿಸಿತ್ತು.
ಈ ಆರೋಪಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿದ ಸಿರಿಸೇನಾ, ಫೆಬ್ರುವರಿ ತಿಂಗಳಿನಲ್ಲಿ ನಾನು ಭಾರತಕ್ಕೆ ಭೇಟಿ ನೀಡಿದಾಗ ಮೀನುಗಾರಿಕೆ ವಿಷಯದ ಕುರಿತಾಗಿ ದೀರ್ಘಕಾಲ ಚರ್ಚಿಸಿದ್ದೇವೆ. ಭಾರತದೊಂದಿಗಿನ ನಮ್ಮ ದೀರ್ಘಕಾಲದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಆಗದ ರೀತಿಯಲ್ಲಿ ಈ ಸಮಸ್ಯೆ ಬಗೆಹರಿಸಬೇಕೆಂಬುದು ನನ್ನ ಬಯಕೆ ಎಂದು ಹೇಳಿದ್ದಾರೆ.