ಲಖ್ನೌ : ಘರ್ ವಾಪಸಿ ನಡೆಯಬೇಕು, ಭಾರತದ ಪ್ರತಿ ಮಸೀದಿಗಳಲ್ಲೂ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕೆಂಬ ಬೇಡಿಕೆಯನ್ನು ಹೊಂದಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ಯೋಗಿ ಆದಿತ್ಯನಾಥ್ ತಮ್ಮ ನೇತೃತ್ವದ ಹಿಂದೂ ಯುವವಾಣಿ ಮೂಲಕ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಬಿಜೆಪಿ ಸದಸ್ಯತ್ವ ನೋಂದಣಿಗಾಗಿ ಪ್ರಾರಂಭಿಸಲಾಗಿದ್ದ ಮಿಸ್ಡ್ ಕಾಲ್ ಅಭಿಯಾನದಿಂದ ಪ್ರೇರಿತರಾಗಿರುವ ಯೋಗಿ ಆದಿತ್ಯನಾಥ್, ಹಿಂದೂ ವಾಣಿ ಮೂಲಕ ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಲು ಮಿಸ್ಡ್ ಕಾಲ್ ಅಭಿಯಾನ ಪ್ರಾರಂಭಿಸಿದ್ದಾರೆ. ಗೋವನ್ನು ರಾಷ್ಟ್ರಮಾತೆಯೆಂದು ಘೋಷಿಸಬೇಕೆನ್ನುವವರು 07533007511 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದಾಗಿದೆ.
ಗೋವು ಸನಾತನ ಧರ್ಮದ ಗುರುತು, ಭಾರತದ ಆಧ್ಯಾತ್ಮಿಕ ಹಾಗೂ ಆರ್ಥಿಕ ಕ್ಷೇತ್ರಕ್ಕೂ ಗೋವಿಗೂ ಅವಿನಾಭಾವ ಸಂಭಂಧವಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಗೋವಿನ ರಕ್ಷಣೆ ಬಹುಸಂಖ್ಯಾತರ ಭಾವನೆಯಾಗಿರುವುದರಿಂದ ಈ ಅಭಿಯಾನವನ್ನು ಪ್ರಾರಂಭಿಸಿರುವುದಾಗಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಬಹುಸಂಖ್ಯಾತರ ಭಾವನೆಗಳನ್ನು ಗುರುತಿಸಬೇಕು,ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಮಾಡುವುದರ ಜೊತೆಯಲ್ಲೇ ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸುವ ಕೆಲಸವೂ ಆಗಬೇಕಿದೆ ಎಂದು ಸಂಸದ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈಗಾಗಲೇ ಮಹಾರಾಷ್ಟ್ರ, ಹರ್ಯಾಣದಲ್ಲಿ ಗೋಹತ್ಯೆ, ಗೋಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ದೇಶಾದ್ಯಂತ ಗೋಹತ್ಯೆ ನಿಷೇಧ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು. ಈ ಬೆನ್ನಲ್ಲೇ ಬಿಜೆಪಿ ಸಂಸದರು ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕೆಂದು ಪಟ್ಟು ಹಿಡಿದಿದ್ದಾರೆ.