ನವದೆಹಲಿ : ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ನಿಂದ ತಪ್ಪಿಸಿಕೊಳ್ಳಲು ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ನೇಹ ಬೆಳೆಸಲು ಮುಂದಾಗಿದ್ದಾರೆ.
ಈ ಹಿಂದೆ ಛಿದ್ರಗೊಂಡಿದ್ದ ಜನತಾ ಪರಿವಾರ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸನ್ನು ಕಡಿಮೆ ಮಾಡಲು ಮತ್ತೆ ಒಗ್ಗೂಡುವ ಸ್ಥಿತಿಯಲ್ಲಿತ್ತು. ಆದರೆ ಜನತಾ ಪರಿವಾರದೊಂದಿಗೆ ಕೈಜೋಡಿಸಿದ್ದ ಮುಲಾಯಂ ಸಿಂಗ್ ಯಾದವ್ ಇದೀಗ ನರೇಂದ್ರ ಮೋದಿ ಅವರೊಂದಿಗೆ ಸ್ನೇಹಯುತ ಸಂಬಂಧ ವೃದ್ಧಿಗೊಳಿಸಲು ಮುಂದಾಗಿರುವುದು ಜನತಾಪರಿವಾರ ಒಗ್ಗೂಡುವುದಕ್ಕೆ ತೀವ್ರ ಅಡ್ಡಿಯಾಗುವ ಸಾಧ್ಯತೆ ಇದೆ.
ಸಿಬಿಐ ಯಿಂದ ಪಾರಾಗುವುದಕ್ಕಾಗಿ ಮುಲಾಯಂ ಸಿಂಗ್ ಯಾದವ್ ನರೇಂದ್ರ ಮೋದಿ ಅವರ ವಿರೋಧ ಎದುರಿಸಲು ಸಿದ್ಧರಿಲ್ಲ. ಈ ಹಿನ್ನೆಲೆಯಲ್ಲಿ ಜನತಾ ಪರಿವಾರಕ್ಕಿಂತಲೂ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಮುಂದಾಗಿದ್ದಾರೆ ಎಂದು ಇಂಡಿಯಾ ಟುಡೆ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ.
ಸಂಸತ್ ನಲ್ಲೂ ಸಮಾಜವಾದಿ ಪಕ್ಷದ ನಡೆ ಗಮನಿಸಿದರೆ ಈ ವರದಿಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಎನ್.ಡಿ.ಎ ಸರ್ಕಾರ ಮಂಡಿಸಿದ್ದ ಕಲ್ಲಿದ್ದಲು ಹಾಗೂ ಖನಿಜ ಮಸೂದೆಗಳಿಗೆ ಸಮಾಜವಾದಿ ಪಕ್ಷ ಬೆಂಬಲ ನೀಡಿತ್ತು. ಆದರೆ ಮುಸ್ಲಿಂ ಓಟ್ ಬ್ಯಾಂಕ್ ನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಮುಲಾಯಂ ಸಿಂಗ್ ಯಾದವ್ ಕೇಂದ್ರ ಸರ್ಕಾರಕ್ಕೆ ನೇರವಾಗಿ ಬೆಂಬಲ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಾರೆ ಮುಲಾಯಂ ಸಿಂಗ್ ಯಾದವ್ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಮುಂದಾದರೆ ಅದು ಜನತಾಪರಿವಾರ ಒಗ್ಗೂಡುವುದಕ್ಕೆ ಅಡ್ಡಿಯಾಗಲಿದೆ.