ಜಮ್ಮು-ಕಾಶ್ಮೀರ : ಪ್ರವಾಹ ಪೀಡಿತ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಅಲ್-ಬದರ್ ಮತ್ತು ತೆಹ್ರೀಕ್-ಇ-ಜಿಹಾದ್ ಉಗ್ರ ಸಂಘಟನೆಗಳು ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದೆ. ಇದರ ಜೊತೆಯಲ್ಲೇ ಪಾಕಿಸ್ತಾನದಿಂದ ಉಗ್ರರು ಭಾರತದ ಗಡಿಯೊಳಗೆ ನುಸುಳಲು ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಜೈಲಿನ ಮೇಲೆಯೂ ಉಗ್ರರ ದಾಳಿ ನಡೆಯುವ ಸಂಭವವಿದೆ. ಹಲವು ಕ್ರಿಮಿನಲ್ ಪ್ರಕರಣದ ಅಪರಾಧಿಗಳು ಹಾಗೂ ವಿಚಾರಣೆ ಎದುರಿಸುತ್ತಿರುವ ಆರೋಪಿಗಳನ್ನು ಈ ಜೈಲಿನಲ್ಲಿ ಇರಿಸಲಾಗಿದೆ. ಇನ್ನು ಸೇನೆಯ ಕ್ಯಾಂಪ್ ಗಳ ಮೇಲೂ ಉಗ್ರರು ಕಣ್ಣಿಟ್ಟಿದ್ದು ಎಚ್ಚರಿಕೆ ವಹಿಸಬೇಕೆಂದು ಗುಪ್ತಚರ ಇಲಾಖೆ ಸೂಚನೆ ನೀಡಿದೆ.
ಪ್ರಸ್ತುತ ಜಮ್ಮು-ಕಾಶ್ಮೀರ ಪ್ರವಾಹ ಪೀಡಿತ ರಾಜ್ಯವಾಗಿದೆ. ಜನಜೀವನ ಅಸ್ತವ್ಯಸ್ಥಗೊಂಡಿರುವುದರ ಬೆನ್ನಲ್ಲೇ ಉಗ್ರರ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿರುವುದು ಜನರಿಗೆ ಮತ್ತಷ್ಟು ಆತಂಕ ಉಂಟಾಗಿದೆ.