ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆಯನ್ನು ಏಪ್ರಿಲ್ ನಲ್ಲಿ ನಡೆಸಲು ಸಜ್ಜಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಹೈಕಮಾಂಡ್ ಪ್ರಾಥಮಿಕ ಹಂತದ ಚರ್ಚೆ ನಡೆಸಲು ಏ.5ರಂದು ದೆಹಲಿಗೆ ತೆರಳಲಿದ್ದಾರೆ.
ಕೇಂದ್ರ ಸರ್ಕಾರವು ಏ.5ರಂದು ದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಮುಖ್ಯ ನ್ಯಾಯಾಧೀಶರ ಸಮಾವೇಶ ಆಯೋಜಿಸಿದೆ. ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಿಎಂ ದೆಹಲಿಗೆ ತೆರಳಲಿದ್ದು, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ನೊಂದಿಗೆ ಸಚಿವ ಸಂಪುಟ ಪುನರ್ ರಚನೆ ಹಾಗೂ ವಿಸ್ತರಣೆ ಕುರಿತು ಪ್ರಾಥಮಿಕ ಹಂತದ ಚರ್ಚೆಯನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ದೆಹಲಿ ಪ್ರವಾಸದ ಕುರಿತು ತಿಳಿಯುತ್ತಿದ್ದಂತೆಯೇ ಸಚಿವ ಸ್ಥಾನಾಕಾಂಕ್ಷಿಗಳ ದಂಡು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಮುಗಿ ಬೀಳುತ್ತಿದೆ.
ಜತೆಗೆ, ಜಾತಿವಾರು ಶಾಸಕರ ಸಭೆಗಳ ಆಯೋಜನೆಗೊಳ್ಳುತ್ತಿವೆ. ಮಂಗಳವಾರ ಸಚಿವ ಸ್ಥಾನಾಕಾಂಕ್ಷಿಗಳಾದ ಕೆ.ಬಿ.ಕೋಳಿವಾಡ. ಎ.ಮಂಜು ಸೇರಿದಂತೆ ಹಲವರು ಆಕಾಂಕ್ಷಿಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಮನದಾಸೆಯನ್ನು ತೋಡಿಕೊಂಡಿದ್ದಾರೆ.