ಮಿಜೋರಂ : ರಾಜೀನಾಮೆ ನೀಡುವಂತೆ ಸೂಚಿಸಿದ್ದ ಕೇಂದ್ರ ಸರ್ಕಾರದ ಜತೆ ಸಂಘರ್ಷಕ್ಕಿಳಿದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮಿಜೋರಂ ರಾಜ್ಯಪಾಲ ಅಜೀಜ್ ಖುರೇಶಿ ಅವರನ್ನು ವಜಾಗೊಳಿಸಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನ ಪ್ರಕಟಣೆ ಹೊರಡಿಸಿದೆ.
ಖುರೇಶಿ ಅವರಿಂದ ತೆರವಾಗಿರುವ ಮಿಜೋರಂ ರಾಜ್ಯಪಾಲ ಹುದ್ದೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿ ನಾಥ ತ್ರಿಪಾಠಿ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಇದರೊಂದಿಗೆ, ಪುಟ್ಟರಾಜ್ಯ ಮಿಜೋರಂ ಕೇವಲ 9 ತಿಂಗಳ ಅವಧಿಯಲ್ಲಿ ಏಳನೇ ರಾಜ್ಯಪಾಲರನ್ನು ಕಾಣುವಂತಾಗಿದೆ.
ಯುಪಿಎ ಅವಧಿಯಲ್ಲಿ ಉತ್ತರಾಖಂಡ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಖುರೇಶಿ ಅವರು ಎನ್ಡಿಎ ಸರ್ಕಾರ ಅಧಿಕಾರಕ್ಕೇರಿದ ಬಳಿಕ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮಿಜೋರಂಗೆ ವರ್ಗಾಯಿಸಲಾಗಿತ್ತು. ಅವರ ಅವಧಿ 2017ರವರೆಗೂ ಇತ್ತು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ವಜಾಗೊಳ್ಳುತ್ತಿರುವ ಎರಡನೇ ರಾಜ್ಯಪಾಲ ಖುರೇಶಿ ಅವರಾಗಿದ್ದಾರೆ. ಈ ಮೊದಲು ಕಮಲಾ ಬೇನಿವಾಲ್ ಅವರನ್ನು ಮಿಜೋರಂಗೆ ವರ್ಗಾಯಿಸಿ, ಹುದ್ದೆಯಿಂದ ವಜಾ ಮಾಡಲಾಗಿತ್ತು. ಪುದುಚೇರಿಯ ಉಪರಾಜ್ಯಪಾಲ ವೀರೇಂದ್ರ ಕಟಾರಿಯಾ ಅವರನ್ನೂ ವಜಾ ಮಾಡಲಾಗಿತ್ತು.
ಕೇಂದ್ರ ಸರ್ಕಾರದ ಸೂಚನೆ ಪಾಲಿಸಿ ಎಂ.ಕೆ. ನಾರಾಯಣನ್ (ಪಶ್ಚಿಮ ಬಂಗಾಳ), ಅಶ್ವನಿ ಕುಮಾರ್ (ನಾಗಾಲ್ಯಾಂಡ್), ಬಿ.ಎಲ್. ಜೋಶಿ (ಉತ್ತರಪ್ರದೇಶ), ಶೇಖರ್ ದತ್ (ಛತ್ತೀಸ್ಗಢ), ಬಿ.ವಿ. ವಾಂಛೂ (ಗೋವಾ) ಅವರು ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೆ. ಶಂಕರನಾರಾಯಣ ಅವರನ್ನು ಮಿಜೋರಂಗೆ ವರ್ಗಾಯಿಸಲಾಗಿತ್ತು. ಬಳಿಕ ಅವರೇ ರಾಜೀನಾಮೆ ನೀಡಿದ್ದರು.