ನವದೆಹಲಿ : 'ಆಮ್ ಆದ್ಮಿ ಪಕ್ಷ'ದ ಆಂತರಿಕ ಭಿನ್ನಮತ ಉಲ್ಭಣಗೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಮಾ.27ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್, ಅರವಿಂದ್ ಕೇಜ್ರಿವಾಲ್ ಅವರ ನೀತಿಗಳು ಸರಿಯಿದ್ದರೂ ಅವರು ನಡೆದುಕೊಳ್ಳುವ ರೀತಿ ಸರಿಯಿಲ್ಲ. . ಪಕ್ಷದೊಳಗೆ ಪ್ರಜಾಪ್ರಭುತ್ವವೇ ಇಲ್ಲ ಎಂದು ಇಬ್ಬರೂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಒಡೆದು ದೆಹಲಿಯಲ್ಲಿ ಸರ್ಕಾರ ರಚಿಸುವುದು ಕೇಜ್ರಿವಾಲ್ ಇಚ್ಛೆಯಾಗಿತ್ತು. ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ರಾಜೀನಾಮೆ ನೀಡುವಂತೆ ತಮಗೆ ಒತ್ತಾಯಿಸಿದ್ದರು. ಒಂದು ವೇಳೆ ರಾಜೀನಾಮೆ ನೀಡದೇ ಇದ್ದರೆ ಆಮ್ ಆದ್ಮಿ ಪಕ್ಷವನ್ನೂ ಇಬ್ಭಾಗ ಮಾಡುವ ಬೆದರಿಕೆ ಹಾಕಿದ್ದರು ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ರಾಜ್ಯ ಘಟಕಗಳಿಗೆ ಸ್ವಾಯತ್ತತೆ ನೀಡುವುದು, ಪ್ರಮುಖ ನಿರ್ಧಾರ ಕೈಗೊಳ್ಳಬೇಕಾದರೆ ಪಕ್ಷದ ಸ್ವಯಂ ಸೇವಕರ ಅಭಿಪ್ರಾಯವನ್ನೂ ಪರಿಗಣಿಸುವುದೂ ಸೇರಿದಂತೆ ನಾವು ಪಕ್ಷದ ನಾಯಕರ ಮುಂದೆ 5ಬೇಡಿಕೆಗಳನ್ನು ಇಟ್ಟಿದ್ದೇವೆ. ಅರವಿಂದ್ ಕೇಜ್ರಿವಾಲ್ ಭೇಟಿಗೆ ಮಾ.16ರಂದು ನಾನು ಎಸ್.ಎಂ.ಎಸ್ ಮಾಡಿದ್ದೆ. ಆದರೆ ಈವರೆಗೂ ಎಸ್ ಎಂ.ಎಸ್. ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಎಎಪಿ ಶಾಸಕರು ನನ್ನ ಹಾಗೂ ಯೋಗೇಂದ್ರ ಯಾದವ್ ವಿರುದ್ಧ ಸುಳ್ಳು ಸುದ್ದಿಯನ್ನು ಹರಡಿಸುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿ ದಿನದಿಂದ ದಿನಕ್ಕೆ ಆಂತರಿಕ ಕಲಹ ಹೆಚ್ಚಾಗುತ್ತಿದ್ದು, ಆಮ್ ಆದ್ಮಿ ಇತರ ಪಕ್ಷಗಳ ಹಾದಿಯನ್ನೇ ಹಿಡಿದಂತಾಗಿದೆ.