Untitled Document
Sign Up | Login    
Dynamic website and Portals
  
March 24, 2015

ಧನ ವಿನಿಯೋಗ ವಿಧೇಯಕ ಅಂಗೀಕಾರ

ಧನ ವಿನಿಯೋಗ ವಿಧೇಯಕ ಅಂಗೀಕಾರ

ಬೆಂಗಳೂರು : ಪ್ರಸಕ್ತ 2015ರ ಕರ್ನಾಟಕ ಧನ ವಿನಿಯೋಗ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಮಂಡಿಸಿದ ವಿಧೇಯಕದ ಬಗ್ಗೆ ಚರ್ಚೆಯಾದ ನಂತರ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮತಕ್ಕೆ ಹಾಕಿದಾಗ ಧ್ವನಿಮತದ ಅನುಮೋದನೆ ದೊರೆಯಿತು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ 2014-15ನೇ ಸಾಲಿನ ಮೂರನೇ ಹಾಗೂ ಅಂತಿಮ ಕಂತಿನ 4713 ಕೋಟಿ ರೂ. ಪೂರಕ ಅಂದಾಜುಗಳಿಗೆ ಅನುಮೋದನೆ ನೀಡುವಂತೆ ಕೋರಿದರು.

ಪೂರಕ ಅಂದಾಜಿನಲ್ಲಿ 2237 ಕೋಟಿ ರೂ. ಹೊರ ಹೋಗುವ ವೆಚ್ಚವಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆದಾರರಿಗೆ ನೀಡಬೇಕಾದ ಮೊತ್ತ 485 ಕೋಟಿ ರೂ. ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಸಂಬಂಧಿಸಿದ 330 ಕೋಟಿ ರೂ. ಹಾಗೂ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ ಗೆ ನೀಡುವ 100 ಪ್ರೋತ್ಸಾಹ ಧನ ಸೇರಿದೆ ಎಂದರು.

ಒಟ್ಟಾರೆ ಮೂರು ಕಂತುಗಳ ಅಂದಾಜು ವೆಚ್ಚವು ಒಟ್ಟು ಬಜೆಟ್ ಮೊತ್ತ ಶೇ.8.71ರಷ್ಟಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಇದೆ ಎಂದು ಸಮರ್ಥಿಸಿಕೊಂಡರು. ಈ ಹಂತದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪೂರಕ ಅಂದಾಜುಗಳಲ್ಲಿನ ಕೆಲವು ಯೋಜನೆಗಳನ್ನು ಬಜೆಟ್‌ನಲ್ಲೇ ಸೇರ್ಪಡೆ ಮಾಡಬಹುದಿತ್ತು. ದೂರದೃಷ್ಟಿಯ ಕೊರತೆಯಿಂದ ಇಂಥ ಲೋಪ ದೋಷಗಳಾಗಿವೆ ಎಂದು ಟೀಕಿಸಿದರು. ಬಳ್ಳಾರಿ ಪ್ಯಾಕೇಜ್, ಉದ್ಯೋಗ ಖಾತ್ರಿ ಮೊದಲಾದವುಗಳನ್ನು ಪೂರಕ ಅಂದಾಜಿನಲ್ಲಿ ತರುವ ಅಗತ್ಯವಿರಲ್ಲಿಲ್ಲ ಎಂದರು.

ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ, ಲೋಕೋಪಯೋಗಿ ಇಲಾಖೆ ನೀಡಬೇಕಾಗಿರುವ ಬಿಲ್ 2000 ಕೋಟಿ ರೂ. ನಷ್ಟಿದ್ದರೂ, ಪೂರಕ ಅಂದಾಜಿನಲ್ಲಿ ಕಡಿಮೆ ಅನುದಾನ ಒದಗಿಸಲಾಗಿದೆ. ಸಿದ್ದರಾಮಯ್ಯ ಅವರು, ಗುತ್ತಿಗೆದಾರರ ಬಿಲ್ ಬಾಕಿ ಶಾಪ ವಿಮೋಚನೆ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಆಸಕ್ತಿ ತೋರಬೇಕು ಎಂದು ಹೇಳಿದರು. ಬಿಜೆಪಿಯ ಲಕ್ಷ್ಮಣ ಸವದಿ ಎಪಿಎಂಸಿಗಳ ಮೂಲಸೌಲಭ್ಯ ಅಭಿವೃದ್ಧಿಗೆ ಅನುದಾನ ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೂರಕ ಅಂದಾಜು ಮಂಡನೆ ನಿರಂತರ ಪ್ರಕ್ರಿಯೆಯಾಗಿದ್ದು, ಎಲ್ಲರ ಕಾಲದಲ್ಲೂ ನಡೆದಿದ್ದು, ಮೊತ್ತ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂದರು. ಕಳೆದ ಸಾಲಿನಲ್ಲಿ ಪೂರಕ ಅಂದಾಜು ಒಟ್ಟು ಬಜೆಟ್‌ನ ಶೇ.9.74ರಷ್ಟಿತ್ತು. ಈ ಬಾರಿ ಶೇ. 8.71ಗೆ ಇಳಿಕೆಯಾಗಿದೆ ಎಂದು ವಿವರಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited