ನವದೆಹಲಿ : 'ಪಾಕ್ ದಿನಾಚರಣೆ'ಯಲ್ಲಿ ಪಾಲ್ಗೊಂಡಿದ್ದಕ್ಕೆ ಅಸಮಾಧಾನ ಹೊಂದಿದ್ದರೆ ಜ|ವಿ.ಕೆ ಸಿಂಗ್ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ಒತ್ತಡದಿಂದ ಪಾಕಿಸ್ತಾನ ದಿನಾಚರಣೆಯಲ್ಲಿ ಭಾಗವಹಿಸಿದ್ದರೆ, ಅವರು ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಪಾಕಿಸ್ತಾನ ರಾಯಭಾರ ಕಚೇರಿ ಹಮ್ಮಿಕೊಂಡಿದ್ದ ಪಾಕ್ ದಿನಾಚರಣೆಗೆ ತಮ್ಮನ್ನು ಕಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕ್ರಮಕ್ಕೆ ಸ್ವತಃ ಮಂತ್ರಿಮಂಡಲದ ಸಚಿವರಾದ ನಿವೃತ್ತ ಸೇನಾ ಮುಖ್ಯಸ್ಥ ಜ| ವಿ.ಕೆ.ಸಿಂಗ್ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.
ಮನಸ್ಸಿಲ್ಲದ ಮನಸ್ಸಿನಿಂದ ಹೋಗಿದ್ದು. ಅಸಹ್ಯವೆನ್ನಿಸುತ್ತಿದೆ ಎಂಬ ಜ|ವಿ.ಕೆ ಸಿಂಗ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮನೀಶ್ ತಿವಾರಿ, ವಿ.ಕೆ ಸಿಂಗ್ ಅವರಿಗೆ ಅಸಹ್ಯವಾಗುತ್ತಿದ್ದರೆ ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ. ಸಿಂಗ್ ರ ಈ ಹೇಳಿಕೆ ವಿವಾದಕ್ಕೀಡಾಗುವ ಸಾಧ್ಯತೆ ಇದೆ. ಒಬ್ಬ ನಿವೃತ್ತ ಸೇನಾ ಮುಖ್ಯಸ್ಥನಾಗಿ ಭಾರತ ದ್ವೇಷಿ ಪಾಕ್ ನ ಸಮಾರಂಭದಲ್ಲಿ ಪಾಲ್ಗೊಂಡ ಬಗ್ಗೆ ಸಿಂಗ್ ವಿರುದ್ಧ ಹುತಾತ್ಮರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.