ಬೆಂಗಳೂರು : 'ಐ.ಎ.ಎಸ್' ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಡ ಮತ್ತಷ್ಟು ಹೆಚ್ಚುತ್ತಿದೆ. ತಮ್ಮ ಪುತ್ರನ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಡಿ.ಕೆ ರವಿ ಅವರ ಪೋಷಕರು ಸಹೋದರ, ಸಹೋದರಿಯರು ಕೈಮುಗಿದು ಬೇಡಿದರೂ ತಕ್ಷಣವೇ ಸಿಬಿಐ ತನಿಖೆಗೆ ಒಪ್ಪಿಸಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಸಿಬಿಐ ತನಿಖೆಗೆ ಒತ್ತಾಯಿಸಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರವಿ ಅವರ ಪೋಷಕರನ್ನು ಭೇಟಿ ಮಾಡಿ ಮನವೊಲಿಕೆಗೆ ಯತ್ನಿಸಿದ ಸಿದ್ದರಾಮಯ್ಯ, ಬುಧವಾರ ಮರಣೋತ್ತರ ಪರೀಕ್ಷೆಯ ಬಗ್ಗೆ ಸಮಗ್ರ ವರದಿ ಬರಲಿದೆ. ವರದಿ ಬಂದ ನಂತರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ನಿರ್ಧಾರವನ್ನು ಸದನದಲ್ಲೇ ಘೋಷಿಸುತ್ತೇನೆ ಎಂದು ಹೇಳಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ರವಿ ಅವರ ತಂದೆ ಕರಿಯಪ್ಪ, ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸದಿದ್ದರೆ ತಾನು ವಿಧಾಸೌಧದ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ತಾಯಿ ಗೌರಮ್ಮ ಸಹ ಇದೇ ಮಾತನ್ನು ಹೇಳಿದ್ದು, ರವಿ ನನಗೊಬ್ಬನಿಗೆ ಮಗನಲ್ಲ.ಅವನು ದೇಶದ ಮಗ.ಅವನು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ, ಅವನನ್ನು ಕೊಲೆ ಮಾಡಲಾಗಿದೆ. ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿ ನಮಗೆ ನ್ಯಾಯ ಒದಗಿಸಬೇಕು ,ಇಲ್ಲವಾದಲ್ಲಿ ನಾವೆಲ್ಲರೂ ಇಲ್ಲೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಿಟ್ಟರು.