ನವದೆಹಲಿ : ಆಮ್ ಆದ್ಮಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ನಾಯಕ ಪ್ರಶಾಂತ್ ಭೂಷಣ್ ಅವರು ಬುಧವಾರ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ.
ಭಿನ್ನಾಭಿಪ್ರಾಯ ಶಮನಕ್ಕಾಗಿ ಮಾ.17ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ವಿರುದ್ಧವೇ ಬಂಡಾಯವೆದ್ದಿದ್ದ ಪ್ರಶಾಂತ್ ಭೂಷಣ್ ಹಾಗೂ ಯೇಗೇಂದ್ರ ಯಾದವ್ ಅವರನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದರು. ಇದರ ಬೆನ್ನಲ್ಲೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಪಕ್ಷದಲ್ಲಿ ತಾವು ಹೊಂದಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಆಪ್ ಹಿರಿಯ ನಾಯಕ ಸಂಜಯ್ ಸಿಂಗ್ ಅವರು, ಸಮಸ್ಯೆ ಪರಿಹಾರವಾಗುವವರೆಗೂ ಈ ಬಗ್ಗೆ ಪಕ್ಷ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳುತ್ತಿರುವವರನ್ನೇ ಕೇಳಿ ಎಂದಿದ್ದಾರೆ.
ಸಂಜಯ್ ಸಿಂಗ್, ಕುಮಾರ್ ವಿಶ್ವಾಸ್, ಆಶುತೋಷ್ ಮತ್ತು ಆಶಿಶ್ ಖೆತನ್ ಅವರು ಕೇಜ್ರಿವಾಲ್ ಆಪ್ತರಾಗಿದ್ದು, ಸೋಮವಾರ ರಾತ್ರಿ ಇವರೆಲ್ಲರೂ ಯೇಗೇಂದ್ರ ಯಾದವ್ ಅವನ್ನು ಭೇಟಿ ಮಾಡಿ, ಪಕ್ಷದಲ್ಲಿನ ಆಂತರಿಕ ಕಲಹದ ಕುರಿತು ಚರ್ಚಿಸಿದ್ದರು. ಆದರೆ ಈ ನಿಯೋಗವನ್ನು ಭೇಟಿ ಮಾಡಲು ನಿರಾಕರಿಸಿರುವ ಪ್ರಶಾಂತ್ ಭೂಷಣ್, ತಮ್ಮಲ್ಲಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಕೇಜ್ರಿವಾಲ್ ಅವರನ್ನೇ ಭೇಟಿ ಮಾಡುತ್ತೇನೆ, ಅವರ ಪ್ರತಿನಿಧಿಗಳನ್ನಲ್ಲ ಎಂದಿದ್ದಾರೆ.