ನವದೆಹಲಿ : ಇತ್ತೀಚೆಗೆ ಬಿಜೆಪಿ ಸಂಸದೀಯ ಪಕ್ಷದ ಸಭೆಗೆ ತಡವಾಗಿ ಬಂದ ಸಂಸದರನ್ನು ಬಾಗಿಲ ಹೊರಗೆ ನಿಲ್ಲಿಸುವ ಶಿಕ್ಷೆ ನೀಡಲಾಗಿತ್ತು. ಈಗ ಈ ಸಭೆಯಲ್ಲಿ ಇನ್ನೊಂದು ವಿಭಿನ್ನ ಶಿಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ವಿವಾದಾತ್ಮಕ ಭೂ ಸ್ವಾಧೀನ ಮಸೂದೆಯನ್ನು ಮತಕ್ಕೆ ಹಾಕುವ ನಿರ್ಣಾಯಕ ದಿನದಂದೇ ಲೋಕಸಭೆಯ ಅಧಿವೇಶನಕ್ಕೆ ಗೈರು ಹಾಜರಾಗಿದ್ದ ಬಿಜೆಪಿಯ 24 ಸಂಸದರಿಗೆ ಮೋದಿ ಅವರು, ಶಾಲೆಯಲ್ಲಿ ಮಕ್ಕಳಿಗೆ ಮಾಸ್ತರರು ನೀಡುವ ’ನಿಲ್ಲುವ ಶಿಕ್ಷೆ' ನೀಡಿದ್ದಾರೆ. ಶಿಕ್ಷೆಗೆ ಒಳಗಾದ ಸಂಸದರಲ್ಲಿ ಸಚಿವ ಬಾಬುಲ್ ಸುಪ್ರಿಯೊ, ನಟ ಶತ್ರುಘ್ನ ಸಿನ್ಹಾ, ವರುಣ್ ಗಾಂಧಿ, ಪೂನಮ್ ಮಹಾಜನ್, ಪ್ರೀತಂ ಮುಂಡೆ ಮತ್ತಿತರರು ಇದ್ದರು.
ವಿಪಕ್ಷಗಳಿಂದ ಭಾರೀ ವಿರೋಧಕ್ಕೆ ಗುರಿಯಾಗಿದ್ದ ಭೂ ಸ್ವಾಧೀನ ಮಸೂದೆಯನ್ನು ಮತಕ್ಕೆ ಹಾಕುವ ನಿರ್ಣಾಯಕ ದಿನ ಎಲ್ಲ ಸಂಸದರು ಲೋಕಸಭೆಯಲ್ಲಿ ಹಾಜರಿರಬೇಕೆಂದು ಸೂಚಿಸಿದ್ದರೂ 24 ಸಂಸದರು, ವಿವಿಧ ಕಾರಣ ನೀಡಿ ಮತದಾನದ ವೇಳೆ ನಾಪತ್ತೆಯಾಗಿದ್ದರು.
ಸಂಸದರು ಗೈರು ಹಾಜರಾಗಿದ್ದ ವಿಷಯ ಪ್ರಸ್ತಾವಕ್ಕೆ ಬಂದಾಗ ಮೋದಿ, 'ದಯವಿಟ್ಟು ಆ ಸಂಸದರು ಎದ್ದುನಿಲ್ಲಿ. ಎಲ್ಲರಿಗೂ ನಿಮ್ಮ ಮುಖದರ್ಶನವಾಗಲಿ' ಎಂದರು. ಸಂಸದರು ಎದ್ದು ನಿಂತಿರುವಂತೆಯೇ ತಮ್ಮ ತ್ರಿರಾಷ್ಟ್ರ ಪ್ರವಾಸದ ವಿವರ ನೀಡಿದರು.