ನವದೆಹಲಿ : ಬಜೆಟ್ ಮೇಲಿನ ಚರ್ಚೆ ವೇಳೆ ತಾವು ಮಾತನಾಡುತ್ತಿದ್ದ ಸಂದರ್ಭ, ಆಡಳಿತ ಪಕ್ಷದ ಸದಸ್ಯರಿಬ್ಬರು ಹರಟೆಯಲ್ಲಿ ತೊಡಗಿದ್ದನ್ನು ಕಂಡು ಬೇಸರಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ ಘಟನೆ ನಡೆಯಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡ, ಬಜೆಟ್ ನಲ್ಲಿ ರೈತರ ಅಭ್ಯುದಯಕ್ಕೆ ಮತ್ತು ದೇಶೀಯ ಕೈಗಾರಿಕೆಗಳಿಗೆ ನೆರವು ನೀಡುವಂಥ ಯಾವುದೇ ಯೋಜನೆಗಳನ್ನೂ ಪ್ರಸ್ತಾಪಿಸಿಲ್ಲ. ರೈತರ ಪರ ಯಾವುದೇ ಕಾರ್ಯಕ್ರಮಗಳು ಇಲ್ಲದ್ದನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ ಎಂದು ಆಕ್ರೋಶಭರಿತರಾಗಿ ಮಾತನಾಡಿದರು.
ಮಾಜಿ ಪ್ರಧಾನಿಯೊಬ್ಬರು ಹೀಗೆ ಗಂಭೀರ ಚರ್ಚೆಯಲ್ಲಿ ಭಾಗಿಯಾಗಿದ್ದ ಹೊತ್ತಿನಲ್ಲೇ, ಅತ್ತ ಆಡಳಿತ ಪಕ್ಷದ ಸಾಲಿನಲ್ಲಿ ಹಿಂಭಾಗದಲ್ಲಿ ಕುಳಿತಿದ್ದ ಇಬ್ಬರು ಸದಸ್ಯರು ಪರಸ್ಪರ ಹರಟೆ ಹೊಡೆಯುತ್ತಾ ಕುಳಿತಿದ್ದರು. ಸದಸ್ಯರ ಈ ವರ್ತನೆ ನೋಡಿ ಆಕ್ಷೇಪಿಸಿದ ಉಪಸಭಾಪತಿಗಳು, ’ಸುಮ್ಮನೆ ಕುಳಿತುಕೊಳ್ಳಿ, ಇಲ್ಲವೇ ಸದನದಿಂದ ಹೊರ ನಡೆಯಿರಿ' ಎಂದು ಖಡಕ್ ಆಗಿ ನುಡಿದರು.
ಸದಸ್ಯರ ಈ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ದೇವೇಗೌಡ, "ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ ಜನರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದನ್ನೆಲ್ಲಾ ನನ್ನಿಂದ ಸಹಿಸಲಾಗದು. ನಾನು ರಾಜೀನಾಮೆ ನೀಡಿದರೂ ನೀಡಬಹುದು' ಎಂದು ಬೆದರಿಕೆ ಹಾಕಿದರು.
’ಬಹುಷಃ ಇದು ಸಂಸತ್ತಿನಲ್ಲಿ ನನ್ನ ಕಡೆಯ ಭಾಷಣ ಇರಬಹುದು. ಈ ಹಿಂದೆ ಕೂಡಾ ನಾನು ಎರಡು ಬಾರಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ' ಎನ್ನುವ ಮೂಲಕ ತಮ್ಮ ಎಚ್ಚರಿಕೆಯು ಬೆದರಿಕೆ ತಂತ್ರವಲ್ಲ ಎಂದು ದೇವೇಗೌಡ ಸದನದ ಗಮನಕ್ಕೆ ತಂದರು.