ನವದೆಹಲಿ : 'ಕೇಂದ್ರ ಸರ್ಕಾರ'ದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ರೈತರು 56 ಇಂಚಿನ ಎದೆಯನ್ನು 28 ಇಂಚಿಗೆ ಇಳಿಸಲಿದ್ದಾರೆ ಎಂದು ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ದೇಶದ ಯುವ ಜನತೆ ಹಾಗೂ ರೈತರು ನಿಮ್ಮ ಸೊಕ್ಕನ್ನು ಮುರಿಯಲಿದ್ದಾರೆ. ನಿಮ್ಮ 56 ಇಂಚಿನ ಎದೆಯನ್ನು 28 ಇಂಚಿಗೆ ಇಳಿಸಲಿದ್ದಾರೆ ಎಂದು ಅಹ್ಮದ್ ಪಟೇಲ್ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಬಾರ್ಡೋಲಿ, ಚಂಪಾರಣ್ ಸತ್ಯಾಗ್ರಹ ಸೇರಿದಂತೆ ಹಲವು ರೈತಪರ ಚಳುವಳಿಗಳನ್ನು ಹಮ್ಮಿಕೊಂಡಿದೆ. ಈಗಲೂ ರೈತ ಪರ ಹೋರಾಟ ಮುಂದುವರೆಸುವುದಾಗಿ ಸೋನಿಯಾ ಗಾಂಧಿ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಮೋದಿ, ಉತ್ತರ ಪ್ರದೇಶವನ್ನು ಗುಜರಾತ್ ನಂತೆ ಅಭಿವೃದ್ಧಿಪಡಿಸಲು 56 ಇಂಚಿನ ಗುಂಡಿಗೆ ಇರಬೇಕೆಂದು ಹೇಳಿದ್ದರು. ಅದನ್ನೇ ಮುಂದಿಟ್ಟುಕೊಂಡಿರುವ ಕಾಂಗ್ರೆಸ್ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಜಲಫಿರಂಗಿಯನ್ನು ಪ್ರಯೋಗಿಸಿದ್ದಾರೆ.