ನವದೆಹಲಿ : ನಟ ಸೈಫ್ ಅಲಿ ಖಾನ್ ಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿದೆ.
ನಟ ಸೈಫ್ ಅಲಿ ಖಾನ್ ಮುಂಬೈನ ಹೋಟೆಲ್ ಒಂದರಲ್ಲಿ ಗಲಾಟೆ ನಡೆಸಿದ ಪ್ರಕರಣದ ವರದಿಯನ್ನು ತ್ವರಿತವಾಗಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಮುಂಬೈ ಪೊಲೀಸರನ್ನು ಕೇಳಿದೆ. ಈ ವರದಿ ಆಧರಿಸಿ ಖಾನ್ ಗೆ ನೀಡಿರುವ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಸೈಫ್ ಅಲಿ ಖಾನ್ ನೀಡಿದ ಪದ್ಮಶ್ರೀ ಹಿಂಪಡೆಯಬೇಕು ಎಂದು ಸುಭಾಷ್ ಅಗರ್ವಾಲ್ ಎಂಬ ಆರ್.ಟಿ.ಐ ಕಾರ್ಯಕರ್ತ ಅರ್ಜಿ ಹಾಕಿದ್ದರು.
ಆರ್.ಟಿ.ಐ ಅರ್ಜಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವಾಲಯ, ಮುಂಬೈ ಪೊಲೀಸರಿಂದ ಈ ಬಗ್ಗೆ ವರದಿ ಕೇಳಿರುವುದಾಗಿ ತಿಳಿಸಿದೆ. ಸೈಫ್ ಅಲಿ ಖಾನ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ, ಆತನನ್ನು ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಅಗತ್ಯವೇನಿತ್ತು ಎಂದು ಆರ್.ಟಿ.ಐ ಕಾರ್ಯಕರ್ತ ಸುಭಾಷ್ ಅಗರ್ವಾಲ್ ಪ್ರಶ್ನಿಸಿದ್ದಾರೆ.
ಸೈಫ್ ಅಲಿ ಖಾನ್ ಗೆ ನೀಡಿರುವ ಪದ್ಮ ಪ್ರಶಸ್ತಿ ಮಾತ್ರವಲ್ಲದೇ, ಪ್ರಶಸ್ತಿಗೆ ಭಾಜನರಾಗಿರುವ ವಿವಾದಾತ್ಮಕ ವ್ಯಕ್ತಿಗಳಿಂದಲೂ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಸುಭಾಷ್ ಅಗರ್ವಾಲ್ ಒತ್ತಾಯಿಸಿದ್ದಾರೆ.