ಬೆಂಗಳೂರು : ಆಸ್ಟ್ರೇಲಿಯಾದಲ್ಲಿ ಮಾರ್ಚ್ 7 ರ ರಾತ್ರಿ ಹತ್ಯೆಗೀಡಾದ ಬಂಟ್ವಾಳ ಮೂಲದ ಟೆಕ್ಕಿ ಪ್ರಭಾ ಅರುಣ್ ಕುಮಾರ್ ಅವರ ಮೃತದೇಹವನ್ನು ತವರೂರಿಗೆ ತರಲಾಗಿದೆ.
ಭಾನುವಾರ ರಾತ್ರಿ 2 ಗಂಟೆಯ ವೇಳೆಗೆ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ತರಲಾದ ಮೃತದೇಹದ ಅಂತಿಮ ದರ್ಶನಕ್ಕೆ ಬೆಂಗಳೂರಿನ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್ ಕುಮಾರ್ ,ಸಂಸದೆ ಶೋಭಾ ಕರಂದ್ಲಾಜೆ ,ರಾಜ್ಯ ಗೃಹ ಸಚಿವಕೆ.ಜೆ.ಜಾರ್ಜ್ , ಸಚಿವರಾದ ರೋಷನ್ ಬೇಗ್, ದಿನೇಶ್ ಗುಂಡುರಾವ್ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನ ಪಡೆದ ಪ್ರಭಾ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಭಾ ಸಹುದ್ಯೋಗಿಗಳು ಕಂಬನಿ ಮಿಡಿದರು. ಬೆಳಗ್ಗೆ 10.30 ರ ವೇಳೆಗೆ ಎಚ್ಎಎಲ್ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ಪ್ರಭಾ ಮೃತದೇಹವನ್ನು ಮಂಗಳೂರಿಗೆ ತರಲಾಯಿತು.
ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಚಾಮರಾಜನಗರಕ್ಕೆ ತೆರಳುವ ಸಲುವಾಗಿ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ಮಂಗಳೂರಿನ ಕಲ್ಲಡ್ಕ ಬಳಿ ಯಿರುವ ಗ್ರಾಮದ ಪ್ರಭಾ ನಿವಾಸದಲ್ಲಿ ಸಂಜೆ 4 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.
ಪ್ರಭಾ ಅರುಣ್ ಕುಮಾರ್ ಸಿಡ್ನಿ ಹೊರವಲಯದ ವೆಸ್ಟ್ಮೀಡ್ ಎಂಬಲ್ಲಿರುವತನ್ನ ಮನೆಯ ಸಮೀಪ ಮಾರ್ಚ್ 7, ಶನಿವಾರ ರಾತ್ರಿ ಮೊಬೈಲ್ನಲ್ಲಿ ಮಾತನಾಡುತ್ತ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಅವರನ್ನು ಹತ್ಯೆ ಮಾಡಿದ್ದ.
ಪ್ರಭಾ ಅವರ ಪತಿ ಅರುಣ್ ಕುಮಾರ್ ಶೆಟ್ಟಿ ಅವರು ಮಗಳೊಂದಿಗೆ ಬೆಂಗಳೂರಿನ ಬಾಪೂಜಿನಗರದಲ್ಲಿ ನೆಲೆಸಿದ್ದಾರೆ. ನಾಲ್ಕು ವರ್ಷದಿಂದ ಪ್ರಭಾ ಉದ್ಯೋಗ ನಿಮಿತ್ತ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು.