ಜಾಫ್ನಾ : ಶ್ರೀಲಂಕಾದ ಜಾಫ್ನಾದಲ್ಲಿರುವ ತಮಿಳರಿಗೆ ಮನೆ ನಿರ್ಮಿಸಲು ಭಾರತ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಎಲ್ ಟಿಟಿಇ ಸಂಘಟನೆ ಕೇಂದ್ರಸ್ಥಾನವಾಗಿರುವ ಜಾಫ್ನಾಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಜಾಫ್ನಾಕ್ಕೆ ಭೇಟಿ ನೀಡಿರುವುದು ನನ್ನ ಸೌಭಾಗ್ಯ. ನಿರಾಶ್ರಿತರಿಗೆ ಸೂರು ಕಲ್ಪಿಸಲು ನಾವು ಬದ್ಧ. ಶ್ರೀಲಂಕಾ ಸರ್ಕಾರದೊಂದಿಗೆ ಸೇರಿ ಜಾಫ್ನಾದಲ್ಲಿ ಸುಮಾರು 27 ಸಾವಿರ ಮನೆಗಳ ನಿರ್ಮಾಣಕ್ಕೆ ಭಾರತ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಮೋದಿ ಭರವಸೆ ನೀಡಿದರು.
ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಬದುಕಿದ್ದ ವೇಳೆ ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಆಂತರಿಕ ಕಲಹದ ಸಮಯದಲ್ಲಿ ಇದೇ ಜಾಫ್ನಾ ಎಲ್ ಟಿಟಿಇ ಸಂಘಟನೆಯ ರಾಜಧಾನಿಯಾಗಿತ್ತು. ಈಗಲೂ ಇಲ್ಲಿ ಸುಮಾರು 60 ಮಿಲಿಯನ್ ತಮಿಳರು ನಿರಾಶ್ರಿತರಾಗಿದ್ದು, ಶ್ರೀಲಂಕಾ ಸರ್ಕಾರ ಇಲ್ಲಿ ನಿರಾಶ್ರಿತ ಶಿಬಿರಗಳನ್ನು ನಡೆಸುತ್ತಿದೆ.
3 ರಾಷ್ಟ್ರಗಳ ಪ್ರವಾಸದ ನಿಮಿತ್ತ ನಿನ್ನೆ ಶ್ರೀಲಂಕಾಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಾಫ್ನಾಕ್ಕೆ ಭೇಟಿ ನೀಡಿದರು. ಆ ಮೂಲಕ ಜಾಫ್ನಾಕ್ಕೆ ಭೇಟಿ ನೀಡಿದ ಮೊದಲ ಭಾರತ ಪ್ರಧಾನಿ ಎಂಬ ಖ್ಯಾತಿಗೂ ಮೋದಿ ಪಾತ್ರರಾದರು.