ಬೆಂಗಳೂರು : ಕೆಮ್ಮು ಮತ್ತು ಮಧುಮೇಹಕ್ಕೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆಗೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುಣಮುಖರಾಗಿದ್ದು, ಮಾ.16 ರಂದು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಲಿದ್ದಾರೆ.
ಕೆಮ್ಮು ಹಾಗೂ ಮಧುಮೇಹ ನಿಯಂತ್ರಣಕ್ಕೆ ಬಂದಿದೆ. ಸೋಮವಾರದ ವೇಳೆಗೆ ಸಂಪೂರ್ಣ ಗುಣಮುಖರಾಗಲಿದ್ದು, ಅಂದು ಸಂಜೆ ದೆಹಲಿಗೆ ಹಿಂತಿರುಗಲಿದ್ದಾರೆ. 10 ದಿನಗಳ ಚಿಕಿತ್ಸೆ ಪಡೆಯಲು ಬಂದಿರುವ ಕೇಜ್ರಿವಾಲ್ ಚಿಕಿತ್ಸೆಗೆ ಸಂಪೂರ್ಣವಾಗಿ ಸ್ಪಂದಿಸಿದರು. ನಿರೀಕ್ಷೆ ಮೀರಿದ ಫಲಿತಾಂಶ ದೊರಕಿದೆ ಎಂದು ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದ ಮುಖ್ಯ ವೈದ್ಯಾಧಿಕಾರಿ ಡಾಬಬೀನಾ ನಂದಕುಮಾರ್ ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದಾಗ ಕೇಜ್ರಿವಾಲ್ ರಕ್ತದಲ್ಲಿ ಸಕ್ಕರೆ ಅಂಶದ ಪ್ರಮಾಣ 300ರಷ್ಟಿತ್ತು. ಯೋಗ, ಧ್ಯಾನ, ವಿವಿಧ ಥೆರಪಿಗಳನ್ನು ಸತತವಾಗಿ ನೀಡುವ ಮೂಲಕ ಮಧುಮೇಹವನ್ನು ನಿಯಂತ್ರಣಕ್ಕೆ ತರಲಾಗಿದೆ. ಈಗ ಅವರ ದೇಹದಲ್ಲಿ ಊಟಕ್ಕೂ ಮುನ್ನ ರಕ್ತದಲ್ಲಿನ ಸಕ್ಕರೆ ಅಂಶದ ಪ್ರಮಾಣ 90 ಹಾಗೂ ಊಟದ ನಂತರ 130ಕ್ಕೆ ಇಳಿಕೆಯಾಗಿದೆ. ಇದು ಸಾಮಾನ್ಯ ಆರೋಗ್ಯವಂತ ವ್ಯಕ್ತಿಯ ರಕ್ತದಲ್ಲಿರುವ ಸಕ್ಕರೆ ಅಂಶದ ಪ್ರಮಾಣಕ್ಕೆ ಸಮನಾಗಿದೆ ಎಂದು ತಿಳಿಸಿದರು.
ನಿರಂತರವಾಗಿ ಕಾಡುತ್ತಿದ್ದ ಕೆಮ್ಮು ಕಡಿಮೆಯಾಗಿದೆ. ಕೆಮ್ಮಿಲ್ಲದೆ ಕೇಜ್ರಿವಾಲ್ ಈಗ ನಿರರ್ಗಳವಾಗಿ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಕೆಮ್ಮು ನಿಯಂತ್ರಣಕ್ಕೆ ಬಂದಿದೆ. 10 ದಿನಗಳ ಚಿಕಿತ್ಸೆ ಫಲಪ್ರದವಾಗಿದೆ. ಇಲ್ಲಿ ಚಿಕಿತ್ಸೆ ನೀಡಿದ್ದು ಮುಖ್ಯವಲ್ಲ, ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ಬಳಿಕವೂ ಕೇಜ್ರಿವಾಲ್ ಕೆಲವೊಂದು ಕಟ್ಟುಪಾಡುಗಳನ್ನು ಅನುಸರಿಸುವುದು ಮುಖ್ಯ. ಕಳೆದ 3 ದಿನಗಳಿಂದ ಸಾಮಾನ್ಯ ಆಹಾರವನ್ನು ಅವರಿಗೆ ನೀಡಲಾಗುತ್ತಿದೆ. ಅದೇ ರೀತಿಯ ಆಹಾರ ಪಥ್ಯ, ಯೋಗಿಕ್ ಕ್ರಿಯಾಗಳನ್ನು ಮನೆಗೆ ಮರಳಿದ ಬಳಿಕವೂ ಮುಂದುವರೆಸಬೇಕು. ತಂಪು ಪಾನೀಯಗಳನ್ನು ಸಂಪೂರ್ಣವಾಗಿ ತ್ಯಜಿಸಿ ಶುಂಠಿ ಹಾಗೂ ತುಳಸಿ ಟೀ ಮತ್ತು ಮಜ್ಜಿಗೆಯನ್ನು ಸೇವಿಸುವಂತೆ ಸಲಹೆ ನೀಡಿದ್ದೇವೆ. ಅದನ್ನು ಪಾಲಿಸಿದರೆ ಕೇಜ್ರಿವಾಲ್ ಆರೋಗ್ಯದಲ್ಲಿ ಸ್ಥಿರತೆ ಕಾಣಲಿದ್ದು, ಕೆಮ್ಮು ಹಾಗೂ ಮಧುಮೇಹ ನಿಯಂತ್ರಣದಲ್ಲಿಯೇ ಇರಲಿದೆ ಎಂದು ಹೇಳಿದರು.
ಕೇಜ್ರಿವಾಲ್ ಜೊತೆಗೆ ಅವರ ತಂದೆ ಹಾಗೂ ತಾಯಿಗೂ ಚಿಕಿತ್ಸೆ ನೀಡಲಾಗಿದೆ. ಆಯಾಸ ಹಾಗೂ ಸಂಧಿವಾತದಿಂದ ಬಳಲುತ್ತಿದ್ದ ಅವರಿಗೆ ಅದು ವಾಸಿಯಾಗಿದೆ. ಮೂವರೂ ಕೂಡ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆದು ಹಿಂದಿರುಗುತ್ತಿದ್ದಾರೆ ಎಂದರು.
ಕೆಮ್ಮ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಅರವಿಂದ ಕೇಜ್ರಿವಾಲ್ ಮಾ.5ರಂದು ನಗರದ ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ದಾಖಲಾದರು. ಸೋಮವಾರ ಅರವಿಂದ ಕೇಜ್ರಿವಾಲ್ ಆಸ್ಪತ್ರೆಯಿಂದ ದೆಹಲಿಗೆ ಮರಳುತ್ತಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಮಧ್ಯಾಹ್ನ 2 ಗಂಟೆಗೆ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ನಿರ್ಗಮಿಸಲಿರುವ ಅವರು ಸಂಜೆ 4 ಗಂಟೆಯ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹಿಂದಿರುಗದ್ದಾರೆ.
ಮಧುಮೇಹ ಹಾಗೂ ಕೆಮ್ಮಿಗಾಗಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರು ರಸ್ತೆಯಲ್ಲಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಡು ಹಾಡಿ, ಸಾಮಾನ್ಯ ಪ್ರಜೆಯಂತೆ ಎಲ್ಲರೊಂದಿಗೆ ಹರಟೆ ಹೊಡೆದಿದ್ದಾರೆ. ನಿರಂತರ ಕೆಮ್ಮಿನಿಂದ ಮಾತನಾಡಲು ಕಷ್ಟಪಡುತ್ತಿದ್ದ ಅವರು ಈಗ ಗುಣಮುಖವಾಗಿದ್ದಾರೆ. ಚಿಕಿತ್ಸಾಲಯದಲ್ಲಿ ರೋಗಿಗಳ ಮನರಂಜನೆಗಾಗಿ ವಾರಕ್ಕೊಮ್ಮೆ ಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇತ್ತೀಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲ ರೋಗಿಗಳಂತೆ ಭಾಗಿಯಾಗಿ ಹಾಡಿದ್ದಾರೆ.