ಇಸ್ಲಾಮಾದ್ : ಇಸ್ಲಾಮಾಬಾದ್ ಹೈಕೋರ್ಟ್ ನಿಂದಬಿಡುಗಡೆ ಆದೇಶ ಪಡೆದುಕೊಂಡಿದ್ದ 26/11ರ ಮುಂಬೈ ದಾಳಿ ಪ್ರಕರಣದ ರೂವಾರಿ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿ ಬಂಧನ ಅವಧಿಯನ್ನು ಇನ್ನೊಂದು ತಿಂಗಳು ವಿಸ್ತರಿಸಲಾಗಿದೆ.
ಲಖ್ವಿ ಬಿಡುಗಡೆಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಆದೇಶಿಸಿತ್ತು. ಈ ನಿಲುವಿನ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿ ,ದೆಹಲಿಯಲ್ಲಿ ವಿದೇಶಾಂಗ ಇಲಾಖೆಯು ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಅವರನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಿತ್ತು.
ಭಾರತ್ದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಲಖ್ವಿ ಬಂಧನ ಅವಧಿಯನ್ನು ವಿಸ್ತರಿಸುವ ಮೂಲಕ ಬಿಡುಗಡೆದೆ ತಡೆವೊಡ್ಡಿದೆ. ಪಾಕ್ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಲಖ್ವಿ ಪರ ವಕೀಲರು ಒತ್ತಡದಿಂದ ಪಾಕ್ ಸರ್ಕಾರ ಬಿಡುಗಡೆಗೆ ತಡೆಯೊಡ್ಡಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಭಾರತದ ಒತ್ತಡಕ್ಕೆ ಹೆದರಿ ಪಾಕ್ ಸರ್ಕಾರ ಕಾನೂನು ಉಲ್ಲಂಘಿಸಿದೆ.ಇದರಿಂದಾಗಿ ಈಗ ಪಾಕ್ ಸರ್ಕಾರ ಲಕ್ವಿ ಬಿಡುಗಡೆ ಮಾಡುತ್ತಿಲ್ಲ. ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಪಾಕ್ ನಡೆದುಕೊಳ್ಳುತ್ತಿದೆ ಎಂದು ಗುಡುಗಿದ್ದಾರೆ.
ಹಿಂದೆ ಇದೇ ಪ್ರಕರಣದಲ್ಲಿ ಲಖ್ವಿ ಗೆ ಜಾಮೀನು ಸಿಕ್ಕಿತ್ತು. ಆದರೆ ಭಾರತ ಸರ್ಕಾರದ ಆಕ್ರೋಶದ ಹಿನ್ನೆಲೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದ ಪ್ರಕರಣ ದಾಖಲಿಸಿ ಲಖ್ವಿಯನ್ನು ಪುನಃ ರಾವಲ್ಪಿಂಡಿ ಜೈಲಿಗೆ ತಳ್ಳಲಾಗಿತ್ತು. ಆದರೆ ಈ ಬಂಧನವನ್ನು ಅಕ್ರಮ ಎಂದು ಲಖ್ವಿ , ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಇದರ ವಿಚಾರಣೆಯನ್ನು ನಡೆಸಿದ ಹೈಕೋರ್ಟ್, "ಲಖ್ವಿ ಬಂಧನ ಅಕ್ರಮ. ಆತನನ್ನು ಕೂಡಲೇ ಬಿಡುಗಡೆ ಮಾಡಬೇಕು' ಎಂದು ಆದೇಶಿಸಿತ್ತು.