ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಹೆಚ್ಚು ಬಜೆಟ್ ಮಂಡಿಸಿ ದಾಖಲೆ ಮಾಡಿದರೇ ಹೊರತು ಅತ್ಯುತ್ತಮ ಬಜೆಟ್ ಮಂಡಿಸಿ ದಾಖಲೆ ಮಾಡಲು ವಿಫಲರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ಮಾ.13ರಂದು ಮಂಡನೆಯಾದ ಸಿದ್ದರಾಮಯ್ಯ ಸರ್ಕಾರದ 2015-16ನೇ ಸಾಲಿನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಯುವ ಮುಖಂಡ ತೇಜಸ್ವಿ ಸೂರ್ಯ, ರಾಜ್ಯ ಬಜೆಟ್ ನಲ್ಲಿ ಶಾಶ್ವತವಾಗಿ ಉಪಯೋಗವಾಗುವಂತಹ ಸ್ವತ್ತು ನಿರ್ಮಾಣ (asset creation) ಯೋಜನೆಗಳನ್ನು ಘೋಷಿಸಿಲ್ಲ ಎಂದಿದ್ದಾರೆ. ಬಜೆಟ್ ನಲ್ಲಿ ಉಚಿತವಾಗಿ ಆಹಾರ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡುವ ಭಾಗ್ಯ ಯೋಜನೆಗಳನ್ನು ವಿಸ್ತರಿಸಿರುವುದರಿಂದ ಜನತೆ ಸ್ವಾವಲಂಬಿಗಳಾಗುವುದಕ್ಕಿಂತಲೂ ಸರ್ಕಾರದ ಮೇಲೆಯೇ ಅವಲಂಬಿತವಾಗುತ್ತಾರೆ. ರಾಜ್ಯದಲ್ಲಿ ಸ್ವಾವಲಂಬಿಗಳಿಗಿಂತಲೂ ಸರ್ಕಾರದ ಮೇಲೆ ಅವಲಂಬಿತರಾಗುವವರ ಸಂಖ್ಯೆ ಹೆಚ್ಚಿದರೆ ಅದು ಸರ್ಕಾರದ ವೈಫಲ್ಯವನ್ನು ತೋರುತ್ತದೆ ಎಂದು ಹೇಳಿದ್ದಾರೆ.
ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ನರೇಂದ್ರ ಮೋದಿ ಸರ್ಕಾರ, ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ನೀಡಲಾಗುತ್ತಿದ್ದ ಹಣ ಸಂಪನ್ಮೂಲ ವರ್ಗಾವಣೆಯನ್ನು(devolution) ಶೇ.10ರಷ್ಟು ಏರಿಕೆ ಮಾಡಿದ್ದಾರೆ. ಆದರೆ ಇದನ್ನು ಬಳಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಸರ್ಕಾರವೇ ಬಜೆಟ್ ನಲ್ಲಿ ಸರಿಯಾದ ಮಾಹಿತಿ ನೀಡಿಲ್ಲ ಎಂದಿರುವ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರದಿಂದ ಅನುದಾನದ ಕೊರತೆ ಇದೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ.
ತೆರಿಗೆ ಇಳಿಕೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಸಿ.ಎಂ ಸಿದ್ದರಾಮಯ್ಯ, ತಾವೇ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಸರ್ಕಾರ ಘೋಷಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆ ಇರುವುದರಿಂದ, ತೆರಿಗೆ ಹೆಚ್ಚಿಸುವ ಮೂಲಕ ಸಂಪನ್ಮೂಲ ಕೃಡೀಕರಣಕ್ಕೆ ಮುಂದಾಗಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಘೋಷಣಾ ಭಾಗ್ಯವಾಗಿದೆ ಎಂದು ವ್ಯಂಗ್ಯವಾಡಿದ್ದು, ಬಜೆಟ್ ಘೋಷಣಾ ಭಾಗ್ಯಕ್ಕೆ ಸೀಮಿತವಾಗದೇ ಅನುಷ್ಠಾನ ಭಾಗ್ಯವೂ ಇರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.