ಕೊಲಂಬೋ : ಏಕತೆ ಮತ್ತು ಅಖಂಡತೆಗೆ ಶ್ರೀಲಂಕಾ ಮಾದರಿಯಾಗಿದ್ದು ಲಂಕಾ ಪ್ರಗತಿಯಲ್ಲಿ ಭಾರತ ಕೈಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾ.13ರಂದು ಶ್ರೀಲಂಕಾ ಸಂಸತ್ ನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಹಾಗೂ ಶ್ರೀಲಂಕಾ ದಶಕಗಳ ಕಾಲ ಉಗ್ರವಾದವನ್ನು ಅನುಭವಿಸಿವೆ. ಭಾರತ ಕ್ರೂರ ಉಗ್ರವಾದವನ್ನು ಸಮರ್ಥವಾಗಿ ಎದುರಿಸಿದೆ. ಉಭಯ ರಾಷ್ಟ್ರಗಳು ಒಟ್ಟಾಗಿ ಉಗ್ರವಾದವನ್ನು ಹತ್ತಿಕ್ಕಬೇಕು ಎಂದು ಕರೆ ನೀಡಿದ್ದಾರೆ.
ವಿವಿಧತೆಯಲ್ಲಿ ಏಕತೆ ಯಾವುದೇ ದೇಶಕ್ಕೆ ಅದ್ಭುತ ಶಕ್ತಿಯಾಗಬಲ್ಲದು, ಉಭಯ ರಾಷ್ಟ್ರಗಳ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಭಾರತದಲ್ಲಿ ಹೊಸ ಆರ್ಥಿಕ ಶಕೆ ಪ್ರಾರಂಭವಾಗಿದೆ. ಬಂಡವಾಳ ಹೂಡಿಕೆ ಮಾಡಲು ಭಾರತ ಶ್ರೀಲಂಕಾಗೆ ಮೂಲವಾಗಿದೆ ಎಂದರು.
ಭಾರತ, ಶ್ರೀಲಂಕಾ ನಡುವಿನ ಮೀನುಗಾರರ ಸಮಸ್ಯೆ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, ಸಮುದ್ರ ರಕ್ಷಣೆ ಬಗ್ಗೆ ನಾಗರಿಕರು ಗಮನ ಹರಿಸಬೇಕು, ಭಾರತ ಹಾಗೂ ಲಂಕಾ ನಡುವೆ ಭೂ ಗಡಿ ಇಲ್ಲದೇ ಇದ್ದರೂ ಎಲ್ಲಾ ರೀತಿಯಿಂದಲೂ ನಾವಿಬ್ಬರು ಆತ್ಮೀಯ ಸ್ನೇಹಿತರು ಎಂದು ಮೋದಿ ಹೇಳಿದ್ದಾರೆ.