ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಮಾ.12ರಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯ, ಕಳೆದ ಕೆಲವು ದಿನಗಳಿಂದ ರಾಜಾಜಿನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿದ್ದಲಿಂಗಯ್ಯ ಅವರಿಗೆ ಎಚ್1ಎನ್1 ಸೋಂಕು ಕೂಡ ಆವರಿಸಿತ್ತು. ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ದೂರದಬೆಟ್ಟ , ಅಜೇಯ ಚಿತ್ರಗಳನ್ನು ಸೇರಿದಂತೆ 23 ಚಿತ್ರಗಳನ್ನು ಸಿದ್ಧಲಿಂಗಯ್ಯ ಅವರು ನಿರ್ದೇಶಿಸಿದ್ದರು. ಇದಲ್ಲದೆ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದರು.
ಹಲವಾರು ರಾಷ್ಟ್ರ-ರಾಜ್ಯ ಪ್ರಶಸ್ತಿಗಳು ಅವರಿಗೆ ಸಂದಿದ್ದವು. ಗಣ್ಯರು ಹಾಗೂ ಚಿತ್ರರಂಗದ ಅಪಾರ ಅಭಿಮಾನಿಗಳು ಸಿದ್ದಲಿಂಗಯ್ಯ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸಿದ್ದಲಿಂಗಯ್ಯ ಅವರ ಬಂಗಾರದ ಮನುಷ್ಯ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ನಿರ್ಮಿಸಿತ್ತು. 1993-1994ನೇ ಸಾಲಿನಲ್ಲಿ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯೂ ದೊರೆತಿತ್ತು. 1969ರಲ್ಲಿ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ನಿರ್ದೇಶಕರಾಗಿದ್ದ ಸಿದ್ದಲಿಂಗಯ್ಯ ಚಿತ್ರಗಳು ಸಾಮಾಜಿಕ ಕಳಕಳಿಗೆ ಪ್ರಖ್ಯಾತವಾಗಿದ್ದವು.