ಶ್ರವಣಬೆಳಗೊಳ : ಸಾಹಿತ್ಯ ಮತ್ತು ಪ್ರಾದೇಶಿಕ ಅಸಮಾನತೆಯ ನಿವಾರಣೆಗಿಂತ ಮೊದಲು, ಭಾಷೆಯ ಆತಂಕವನ್ನು ತೊಡೆಯುವುದು ಅಗತ್ಯ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಿದ್ಧಲಿಂಗಯ್ಯ ತಿಳಿಸಿದ್ದಾರೆ.
ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 81ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಕನ್ನಡವನ್ನು ಉಳಿಸಬೇಕು. ಕನ್ನಡಿಗನಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯ ಬೇಕು. ಕನ್ನಡಿಗನ ಸ್ವಾಭಿಮಾನ, ಗೌರವ ಮತ್ತು ಹಕ್ಕು ಗಳನ್ನು ಕಾಪಾಡುವುದಕ್ಕೆ ಬೇಕಾದ ಕಾನೂನುಗಳನ್ನು ಜಾರಿಗೆ ತರಬೇಕು. ಇದಕ್ಕೆ ಎದುರಾಗುವ ತೊಡಕುಗಳನ್ನು ಸಾಂವಿಧಾನಿಕವಾಗಿ ಪರಿಹರಿಸಿಕೊಳ್ಳಬೇಕು ಎಂದರು.
ಶಿಕ್ಷಣ ಮಾಧ್ಯಮದ ಗೊಂದಲ ನಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ದೇಶ ಭಾಷೆ ಉಳಿಸುವಲ್ಲಿ ರಾಜ್ಯ ಸರ್ಕಾರದ ನಿಲುವು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಕನ್ನಡಿಗರ ಹೊಣೆಗಾರಿಕೆ ಹೆಚ್ಚಿದೆ. ಕನ್ನಡಿಗರು ದೀರ್ಘ ಆಂದೋಲನಕ್ಕೆ ಸಿದ್ಧವಾಗಿ ತಾರ್ಕಿಕ ಅಂತ್ಯ ಕಾಣುವ ತನಕ ವಿಶ್ರಮಿಸಬಾರದು ಎಂದು ಕರೆ ನೀಡಿದರು.
ಸರ್ವೋಚ್ಚ ನ್ಯಾಯಾಲಯ ಭಾಷಾ ಮಾಧ್ಯಮದ ಕುರಿತು ನೀಡುರುವ ತೀರ್ಪು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಆತಂಕ ಒಡ್ಡಿರುವುದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಷೆಡ್ಯೂಲ್-8ರಲ್ಲಿರುವ ಎಲ್ಲಾ ಭಾಷೆಗಳನ್ನು ಶಿಕ್ಷಣ ಮಾಧ್ಯಮದಲ್ಲಿ ಕಡ್ಡಾಯಗೊಳಿಸಬೇಕು. ದೇಶೀಯ ಭಾಷೆಗಳಲ್ಲಿ ಕಡ್ಡಾಯವಾಗಿ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಿದ್ಧಲಿಂಗಯ್ಯ ಕರೆ ನೀಡಿದರು. ವೇದಿಕೆಯ ಮೇಲಿದ್ದ ಮುಖ್ಯಮಂತ್ರಿಗಳಿಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ದೇಶೀಯ ಭಾಷೆಗಳನ್ನು ಉಳಿಸಲು ನೆರವಾಗುವಂತೆ ಕೋರುವಂತೆ ಅವರು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ಶತಮಾನ ತುಂಬುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ 2015ನೇ ವರ್ಷವನ್ನು "ಕನ್ನಡ ವರ್ಷ-2015' ಎಂದು ಘೋಷಿ ಸಬೇಕು. ಈ ವರ್ಷದುದ್ದಕ್ಕೂ ವಾರದಲ್ಲಿ ಒಂದು ದಿನವನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಛೇರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಕನ್ನಡ ವರ್ಷದ ಆಚರಣೆಗಾಗಿ ಮೀಸಲಿಡಬೇಕು. ಆ ದಿನವನ್ನು "ಕನ್ನಡ ದಿನ' ಎಂದು ಕರೆಯಬೇಕು. ಆ ದಿನದಂದು ಕನ್ನಡ ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ ಮುಂತಾದ ಕ್ಷೇತ್ರಗಳ ಸಂಬಂಧವಾಗಿ ಚರ್ಚೆ, ಉಪನ್ಯಾಸ, ವಿಚಾರ ಸಂಕಿರಣ ಮುಂತಾದ ಸಾಂಸ್ಕೃತಿಕ ಹಾಗು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸಿದ್ಧಲಿಂಗಯ್ಯ ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಿ ಹಾಗು ಅರೆಸರ್ಕಾರಿ ಕಛೇರಿಗಳು, ವಿಶ್ವವಿದ್ಯಾಲಯಗಳು, ಕಾರ್ಖಾನೆಗಳು, ಬ್ಯಾಂಕುಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಮಾತನಾಡಲು ಉತ್ತೇಜಿಸುವ ಸಲುವಾಗಿ "ಕನ್ನಡ ಮಾತಾಡಿ' ಎಂಬ ಚಳುವಳಿಯನ್ನು ಕೂಡಲೇ ಪ್ರಾರಂಭಿಸಬೇಕು. ಈ ಚಳುವಳಿಯಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ಯುವಕರು ಹಾಗೂ ಕನ್ನಡ ಪರ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.