ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಸಂಕಷ್ಟದಿಂದ ಸಧ್ಯ ನಿರಾಳರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿರುವ ಬಹುಪಾಲು ಮಂದಿಯನ್ನು ಪಕ್ಷ ಸಂಘಟನೆಗೆ ನೇಮಕ ಮಾಡುವ ಮಹತ್ವದ ಯೋಜನೆಯನ್ನು ಹೈಕಮಾಂಡ್ ಮಾಡುತ್ತಿದ್ದು, ಪುನಾರಚನೆಯನ್ನು ಎಐಸಿಸಿ ಅಧಿವೇಶನದವರೆಗೆ ತಡೆಹಿಡಿದಿದೆ.
ರಾಷ್ಟ್ರಮಟ್ಟದಲ್ಲಿ ತಳಹಿಡಿಯುತ್ತಿರುವ ಪಕ್ಷವನ್ನು ಮತ್ತೆ ಬಲಪಡಿಸಬೇಕು ಎಂಬುದು ಹೈಕಮಾಂಡ್ ಅಭಿಲಾಷೆ. ಎಐಸಿಸಿ ಪುನಾರಚನೆಗೆ ವೇದಿಕೆ ಸಿದ್ಧವಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಎಐಸಿಸಿ ಅಧಿವೇಶನ ನಡೆಯಲಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪಂಚಾಂಗ ಭದ್ರ ಮಾಡಿ ಕೊಳ್ಳುವ ಬಗ್ಗೆಯೂ ಚಿಂತನೆ ನಡೆಯುತ್ತಿದ್ದು, ಸಂಪುಟದ ಬಹುಪಾಲು ಸದಸ್ಯರನ್ನು ಪಕ್ಷ ಸಂಘಟನೆಗೆ ನಿಯೋಜಿಸುವ ಮಾತುಗಳು ಕೇಳಿ ಬರುತ್ತಿದೆ.
ಸಂಪುಟಕ್ಕೆ ಸೇರಲು ತುದಿಗಾಲಲ್ಲಿ ನಿಂತಿರುವ ನಾಯಕರನ್ನು ಸಮಾಧಾನಪಡಿಸಲು ಬಜೆಟ್ ಅಧಿವೇಶನ ನಂತರ ಸಂಪುಟ ಪುನಾರಚನೆ ಮಾಡಲೇಬೇಕಿತ್ತು. ಆದರೆ ಎಐಸಿಸಿ ಅಧಿವೇಶನ ಸಿದ್ದರಾಮಯ್ಯ ಅವರಿಗೆ ಇನ್ನೊಂದು ಬಾರಿ ಅವಕಾಶ ಮಾಡಿಕೊಟ್ಟಿದೆ. ಸಚಿವರಿಗೂ ನಿಗಮ-ಮಂಡಳಿ ಅಧ್ಯಕ್ಷರ ನಿಗದಿ ಮಾಡುವ ಬಗ್ಗೆ ಆಪ್ತ ವಲಯದವರು ಮತ್ತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಎಐಸಿಸಿ ಮೂಲಗಳಿಂದ ತಿಳಿದು ಬಂದಿದೆ.