ನವದೆಹಲಿ : 'ಲಷ್ಕರ್-ಎ-ತೋಯ್ಬಾ'ಉಗ್ರ ಸಂಘಟನೆಯ ಬಾಂಬ್ ಪರಿಣಿತ ಅಬ್ದುಲ್ ಕರೀಮ್ ತುಂಡಾ ನನ್ನು ಆತನ ವಿರುದ್ಧ 1994ರಲ್ಲಿ ಟಾಡಾ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಿಂದ ದೆಹಲಿ ನ್ಯಾಯಾಲಯ ಬಿಡುಗಡೆ ಮಾಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನೀನಾ ಬನ್ಸಾಲ್ ಕೃಷ್ಣಾ ಅವರು ಅಬ್ದುಲ್ ತುಂಡಾನನ್ನು ಟಾಡಾ ಕಾಯ್ದೆಯಡಿ ದಾಖಲಾಗಿದ್ದ ಅಪರಾಧಕ್ಕೆ ಸಂಚು ರೂಪಿಸಿದ್ದ ಪ್ರಕರಣದಿಂದ ಬಿಡುಗಡೆ ಮಾಡಿದ್ದಾರೆ. ಆದರೂ ಉಗ್ರ ತುಂಡಾ ವಿರುದ್ಧ ಇನ್ನೂ ಅನೇಕ ಪ್ರಕರಣಗಳಿರುವ ಕಾರಣ ಆತ ಜೈಲಿನಲ್ಲೇ ಇರಬೇಕಾಗಿದೆ.
1994ರ ಜನವರಿ 17ರಂದು 150 ಕೆ.ಜಿ ಸ್ಪೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ದೆಹಲಿಯ ವಿಶೇಷ ಪೊಲೀಸ್ ಘಟಕ ಉಗ್ರ ತುಂಡಾ ವಿರುದ್ಧ ಟಾಡಾ (ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯ ತಡೆ)ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಮಾ.10ರಂದು ಪ್ರಕರಣದಿಂದ ತುಂಡಾ ನನ್ನು ವಜಾಗೊಳಿಸಿದೆ.
2013ರ ಆಗಸ್ಟ್ 16ರಂದು ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಉಗ್ರ ತುಂಡಾನನ್ನು ವಿಶೇಷ ಪೊಲೀಸ್ ಘಟಕದಿಂದ ಬಂಧಿಸಲಾಗಿತ್ತು. 1994ರಲ್ಲಿ ವಶಪಡಿಸಿಕೊಂಡ ಸ್ಫೋಟಕಗಳಿಗೂ ಉಗ್ರ ತುಂಡಾನಿಗೂ ಸಂಬಂಧವಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ.