ಮುಂಬೈ : 26/11ರ ಮುಂಬೈ ದಾಳಿ ಮಾದರಿಯಲ್ಲಿಯೇ ಭಯೋತ್ಪಾದರು ಮುಂಬೈ ಮೇಲೆ ಮತ್ತೊಮ್ಮೆ ಬಾರೀ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ರವಾನಿಸಿದೆ.
2008 ರ ಮುಂಬೈ ಉಗ್ರ ದಾಳಿಯ ರೂವಾರಿ ,ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿ ಪಾಕಿಸ್ಥಾನ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ,ಮುಂಬೈ ಮೇಲೆ ಇನ್ನೊಮ್ಮೆ ಭಾರೀ ದಾಳಿ ಮಾಡಲು ಲಷ್ಕರ್ ಉಗ್ರ ಸಂಘಟನೆ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ಸಂಭಾವ್ಯ ದಾಳಿಯ ಕುರಿತಾಗಿ ಈಗಾಗಲೆ ಗುಪ್ತಚರ ಇಲಾಖೆ ಮುಂಬಯಿ ಪೊಲೀಸರಿಗೆ ಎಚ್ಚರಿಕೆ ನೀಡಿ ಕಟ್ಟೆಚ್ಚರ ವಹಿಸಲು ಸಲಹೆ ನೀಡಿದೆ. ನಗರವನ್ನು ಗುರಿಯಾಗಿಸಿ 8 ರಿಂದ 10 ಲಷ್ಕರ್ ಉಗ್ರರು ದಾಳಿಗೆ ಸಿದ್ಧರಾಗಿದ್ದಾರೆ ಎಂದು ನಗರ ಪೊಲೀಸರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ.
ಈ ಬಾರಿಯೂ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ನುಸುಳಿ ,ಪಂಚತಾರ ಹೊಟೇಲ್ ಗಳು ,ರೈಲ್ವೇ ನಿಲ್ದಾಣ ಮತ್ತು ಪ್ರಮುಖ ಜನನಿಭಿಡ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಂಬೈ ಮಾತ್ರವಲ್ಲದೆ ದೇಶದ ಪ್ರಮುಖ ನಗರಗಳಲ್ಲಿಯೂ ದಾಳಿ ನಡೆಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆ ಎಲ್ಲಾ ರಾಜ್ಯಗಳಿಗೆ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ ನೀಡಿದೆ.