ನವದೆಹಲಿ : 'ಜಾನುವಾರುಗಳ ಹತ್ಯೆ'ಯನ್ನು ತಡೆಗಟ್ಟಲು ಹೊಸ ಕಾನೂನು ರಚನೆ ಅಗತ್ಯ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಕ್ಕಾಗಿ ಹೊಸ ಕಾನೂನು ರಚಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ 2006-07ರಲ್ಲಿ ರಚಿಸಿದ್ದ ಕಾನೂನು ಅಲ್ಪಸಂಖ್ಯಾತರ ಕೋಮುಭಾವನೆಯನ್ನು ಕೆರಳಿಸುವ ರೀತಿಯಲ್ಲಿತ್ತು. ಆದರೆ ಅಂದಿನ ಯುಪಿಎ ಸರ್ಕಾರ ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಜಾನುವಾರುಗಳ ಹತ್ಯೆಯನ್ನು ತಡೆಗಟ್ಟಲು 1974ರ ಕಾನೂನು ಬಲಿಷ್ಠವಾಗಿದೆ. ಅದರ ಅನುಷ್ಠಾನದಲ್ಲಿ ವೈಫಲ್ಯತೆ ಇದೆ. 10 ವರ್ಷ ಮೇಲ್ಪಟ್ಟ ಜಾನುವಾರುಗಳನ್ನು ವೈದ್ಯರ ದೃಢೀಕರಣದ ನಂತರ ಕಸಾಯಿಖಾನೆಗೆ ಕಳುಹಿಸಬೇಕೆಂಬ ನಿಯಮವಿದೆ. ಆದರೆ, ಅದು ಚಾಲನೆಯಾಗುತ್ತಿಲ್ಲ. ಪೊಲೀಸ್ ಮತ್ತು ಪಶುವೈದ್ಯ ಇಲಾಖೆ ಜಂಟಿಯಾಗಿ ಕಾನೂನು ಜಾರಿಗೋಳಿಸಿದರೆ ಕಾನೂನು ಬಲಿಷ್ಠವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಬಾರಿ ಗೋ ಶಾಲೆಗಳ ಸ್ಥಾಪನೆಗೆ ಯಾವ ಜಿಲ್ಲೆಯಿಂದಲೂ ಪ್ರಸ್ತಾವನೆ ಬಂದಿಲ್ಲ, ಪ್ರಸ್ತಾವನೆ ಬಂದಲ್ಲಿ ಪರಿಶೀಲಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧಕ್ಕಾಗಿ ಹೊಸ ಕಾನೂನು ರಚಿಸಿ, ಅದನ್ನು ಜಾರಿಗೆ ತರಲಾಗಿದೆ.