ನವದೆಹಲಿ : ದೇಶದ ಅಖಂಡತೆ-ಏಕತೆ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ಪ್ರತ್ಯೇಕತಾವಾದಿಗಳ ವಿರುದ್ಧ ನಮ್ಮೆಲ್ಲರ ಧ್ವನಿಯೂ ಒಂದೇ ಆಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಪ್ರತ್ಯೇಕತಾವಾದಿ ಮುಖಂಡ ಮಸರತ್ ಆಲಂ ಬಿಡುಗಡೆ ವಿವಾದ ಸಂಸತ್ ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಗದ್ದಲ ನಡೆಸಿದರು.
ಈ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ ಪ್ರಧಾನಿ ಮೋದಿ, ದೇಶದ ಅಖಂಡತೆ- ಏಕತೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಸಂಸದರು, ದೇಶದ ಜನರ ಆಕ್ರೋಶಕ್ಕೆ ನಾವೂ ದನಿಗೂಡಿಸುತ್ತೇವೆ ಎಂದರು.
ಮಸರತ್ ಆಲಂ ಬಿಡುಗಡೆ ಕುರಿತು ಜಮ್ಮು-ಕಾಶ್ಮೀರ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇಂತಹ ವಿಚಾರದಲ್ಲಿ ಕೇಂದ್ರ ಸರ್ಕಾರ ಬೆಂಬಲ ನೀಡಲ್ಲ. ಜಮ್ಮು-ಕಾಶ್ಮೀರ ಸರ್ಕಾರ ಕೇಂದ್ರದ ಜತೆ ಸಂಪರ್ಕಿಸಿಲ್ಲ ಎಂದು ಹೇಳಿದರು.
ಆಲಂ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಆ ಸರ್ಕಾರದ ಜತೆ ಚರ್ಚೆ ನಡೆಸಿ ಸಂವಿಧಾನದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ದೇಶದ ಏಕತೆ ಬಗ್ಗೆ ಪ್ರತ್ಯೇಕತಾವಾದಿಗಳು, ದೇಶದ್ರೋಹಿಗಳ ವಿರುದ್ಧ ನಮ್ಮೆಲ್ಲರ ಧ್ವನಿಯೂ ಒಂದೇ ಆಗಿದೆ. ಇಡೀ ದೇಶ ಪ್ರತ್ಯೇಕತಾವಾದಿಗಳ ವಿರುದ್ಧ ಆಕ್ರೋಶಗೊಂಡಿದೆ. ದೇಶ ಭಕ್ತಿಯ ಬಗ್ಗೆ ನಮಗೆ ಹೇಳಿಕೊಡಬೇಕಾದ ಅಗತ್ಯವಿಲ್ಲ. ಕಾಶ್ಮೀರಕ್ಕಾಗಿಯೇ ಶ್ಯಾಮ್ ಪ್ರಸಾದ್ ಮುಖರ್ಜಿ ಜೀವತೆತ್ತರು ಎಂದು ತಿಳಿಸಿದರು.
ಸಂವಿಧಾನದ ಗೌರವ ಕಾಪಾಡೋದು ನಮ್ಮ ಹೊಣೆ. ಪ್ರತ್ಯೇಕತಾವಾದಿ ಬಿಡುಗಡೆ ವಿಚಾರ ರಾಜಕೀಯ ಮಾಡುವ ವಿಷಯವಲ್ಲ, ಸುಗಮ ಕಲಾಪಕ್ಕೆ ಅನುವುಮಾಡಿಕೊಡುವಂತೆ ಪ್ರಧಾನಿ ಮನವಿ ಮಾಡಿದರು.