ಶ್ರೀನಗರ : ಭಾರತ ವಿರೋಧಿ ಪ್ರತಿಭಟನೆ ರೂವಾರಿ, ಪಾಕಿಸ್ತಾನಿ ಪರ ಪ್ರತ್ಯೇಕತವಾದಿ ನಾಯಕ ಮಸರತ್ ಆಲಂ ಬಾರಮುಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದು, ಜಮ್ಮು ಕಾಶ್ಮೀರ ಸರ್ಕಾರದ ಈ ನಡೆಗೆ ಆರ್ ಎಸ್ಎಸ್ ಕಿಡಿಕಾರಿದೆ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ರಾಜಕೀಯ ಕೈದಿಗಳ ಬಿಡುಗಡೆ ಆದೇಶದ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಮುಖಂಡ ಮುಸರತ್ ನನ್ನು ಬಿಡುಗಡೆ ಮಾಡಲು ಆದೇಶ ನೀಡಿದ್ದರು. ಆ ನಿಟ್ಟಿನಲ್ಲಿ ಮುಸರತ್ ಜೈಲಿನಿಂದ ಬಿಡುಗಡೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಪಿಡಿಪಿ ಮುಖಂಡರು ತಾವು ಭಾರತೀಯರು ಹೌದೋ ಅಥವಾ ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆರ್ ಎಸ್ಎಸ್ ಮುಖವಾಣಿ ಆರ್ಗನೈಸರ್ ನಲ್ಲಿ ಪ್ರಶ್ನಿಸಿದ್ದು, ಈ ಬಗ್ಗೆ ಬಿಜೆಪಿ ಪಿಡಿಪಿ ನಿಲುವಿನ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಸೂಚನೆ ನೀಡಿದೆ. ಪಿಡಿಪಿ ಇಬ್ಬಗೆ ನೀತಿ ಅನುಸರಿಸಲು ಸಾಧ್ಯವಿಲ್ಲ ಎಂದು ಆರ್ ಎಸ್ಎಸ್ ಹೇಳಿದೆ.
ಕಣಿವೆ ರಾಜ್ಯದಲ್ಲಿ 2010ರಲ್ಲಿ ನಡೆದ ಭಾರತ ವಿರೋಧಿ ಪ್ರತಿಭಟನೆಯ ಘಟನೆಯಲ್ಲಿ ನಡೆದ ಹಿಂಸಾಚಾರದಲ್ಲಿ 112 ಮಂದಿ ಸಾವನ್ನಪ್ಪಿದ್ದರು. 112 ಯುವಕರ ಸಾವಿಗೆ ಕಾರಣನಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪಾಕಿಸ್ತಾನ ಪರ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂನನ್ನು ಬಂಧಿಸಿದ್ದು, ಕಳೆದ ನಾಲ್ಕು ವರ್ಷಗಳ ಕಾಲ ಬಾರಮುಲ್ಲಾ ಜೈಲಿನಲ್ಲಿದ್ದ.