ಕೊಲಂಬೋ : ಭಾರತೀಯ ಮೀನುಗಾರರು ಶ್ರೀಲಂಕಾದ ನೀರಿಗೆ ತೆರಳುವುದನ್ನು ಕಾನೂನು ರೀತ್ಯಾ ನೋಡದೆ, ಮಾನವೀಯತೆಯಿಂದ ಕಾಣಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರಿಗೆ ತಿಳಿಸಿದ್ದಾರೆ.
ವಿಕ್ರಮಸಿಂಘೆ ಅವರ ಜೊತೆ ನಡೆದ ಮಾತುಕತೆಯಲ್ಲಿ, ಸಂಘರ್ಷದ ವಿಷಯವಾದ ಮೀನುಗಾರರ ವಿಷಯವನ್ನು ಚರ್ಚಿಸಿದ ಸುಷ್ಮಾ ಸ್ವರಾಜ್, ಭಾರತ ಮತ್ತು ಶ್ರೀಲಂಕಾದ ಮೀನುಗಾರರ ದಿನನಿತ್ಯದ ಅಗತ್ಯದ ಹಿತದೃಷ್ಟಿ ಮತ್ತು ಮಾನವೀಯ ಅಗತ್ಯಗಳನ್ನು ಪರಿಗಣಿಸಿ ಈ ಪ್ರಕರಣವನ್ನು ನೋಡಬೇಕೆಂದು ಸುಷ್ಮಾ ಹೇಳಿದ್ದಾರೆ.
ಶ್ರೀಲಂಕಾದ ಎರಡು ದಿನದ ಪ್ರವಾಸದ ನಂತರ ಮಾತನಾಡಿದ ಭಾರತ ಸರ್ಕಾರದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಭಾರತ ಲಂಕಾ ನೀರಿನ ಗಡಿಗೂ, ಇಟಾಲಿಯನ್ ಸಮುದ್ರಕ್ಕೂ ವ್ಯತ್ಯಾಸವಿದೆ. ಮೊದಲಿನದ್ದು ಮಾನವೀಯತೆಗೆ ಸಂಬಂಧಿಸಿದ್ದು ಎರಡನೆಯದು ಕಾನೂನಾತ್ಮಕವಾದದ್ದು ಎಂದಿದ್ದಾರೆ.
ಭಾರತದ ಮೀನುಗಾರರು ಜಲಗಡಿ ದಾಟಿದರೆ ಅವರನ್ನು ನಾವು ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಖಾಸಗಿ ವಾಹಿನಿಯೊಂದರ ಸಂದರ್ಶನಲ್ಲಿ ರನಿಲ್ ವಿಕ್ರಮಸಿಂಘೆ ಹೇಳಿದ್ದ ವರದಿಯ ಹಿನ್ನಲೆಯಲ್ಲಿ ಸುಷ್ಮಾ ಸ್ವರಾಜ್ ಈ ಮಾತುಕತೆ ನಡೆಸಿದ್ದಾರೆ.