ಶ್ರೀನಗರ : 2010ರಲ್ಲಿ ಕಾಶ್ಮೀರ ಕಣಿವೆಯಾದ್ಯಂತ ಭಾರತ ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸಿ, 112 ಯುವಕರ ಸಾವಿಗೆ ಕಾರಣನಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧನಕ್ಕೆ ಒಳಗಾಗಿದ್ದ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂನನ್ನು ಜಮ್ಮು-ಕಾಶ್ಮೀರ ಸರ್ಕಾರ ಬಂಧಮುಕ್ತಗೊಳಿಸಿದೆ. ಇದರಿಂದ ಬಿಜೆಪಿ ಮತ್ತೂಮ್ಮೆ ಮುಜುಗರ ಅನುಭವಿಸುವಂತಾಗಿದೆ.
ಮುಸ್ಲಿಂ ಲೀಗ್ ಮುಖ್ಯಸ್ಥ, ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಸೈಯದ್ ಅಲಿ ಶಾ ಗಿಲಾನಿ ಉತ್ತರಾಧಿಕಾರಿ ಎಂದೇ ಬಿಂಬಿತನಾಗಿರುವ 42 ವರ್ಷದ ಮಸರತ್ನನ್ನು ಬಾರಾಮುಲ್ಲಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಆತ 4 ವರ್ಷಗಳ ಬಳಿಕ ಜೈಲಿನಿಂದ ಹೊರಬಂದಂತಾಗಿದೆ.
ಸಾರ್ವಜನಿಕ ಸುವ್ಯವಸ್ಥೆ ಕಾಯ್ದೆಯಡಿ 2010ರಲ್ಲಿ ಮಸರತ್ನನ್ನು ಬಂಧಿಸಲಾಗಿತ್ತು. ಆದರೆ ಆತನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಇರಲಿಲ್ಲ. ಹೀಗಾಗಿ ಆತನನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲದಿದ್ದರೂ ಬಂಧನವಾಗಿರುವ ಎಲ್ಲ ಪ್ರತ್ಯೇಕತಾವಾದಿ ನಾಯಕರನ್ನೂ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಆದೇಶಿಸಿದ್ದಾರೆ.
ಪ್ರತ್ಯೇಕತಾವಾದಿ ನಾಯಕರ ವಿರುದ್ಧ ರಾಜಕೀಯ ಮಾರ್ಗದ ಮೂಲಕ ಹೋರಾಡಬೇಕೇ ಹೊರತು, ಅವರನ್ನು ಜೈಲಿಗೆ ತಳ್ಳಿ ಅಥವಾ ಅವರ ಮೇಲೆ ನಿರ್ಬಂಧ ಹೇರಿ ಹೋರಾಟ ನಡೆಸುವುದಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನ ದನಿ ಇರಬೇಕು. ಅದರಿಂದ ಪ್ರಜಾಪ್ರಭುತ್ವ ಮತ್ತಷ್ಟು ಚಲನಶೀಲವಾಗುತ್ತದೆ ಎಂಬುದು ಹೊಸ ಸರ್ಕಾರದ ಆಶಯವಾಗಿದೆ ಎಂದು ಮೂಲಗಳು ತಿಳಿಸಿವೆ.