ಬೆಂಗಳೂರು : ಬೆಂಗಳೂರು ಸೇರಿದಂತೆ ಗಡಿಭಾಗದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕರ್ನಾಟಕದ ಮಹತ್ವಾಕಾಂಕ್ಷೆಯ ಸುಮಾರು 450 ಕೋಟಿ ರೂ.ಗಳಿಗೂ ಹೆಚ್ಚಿನ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ತಮಿಳುನಾಡು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸುಮಾರು 6 ಸಾವಿರ ರೈತರು ಪ್ರತಿಭಟನೆಗೆ ಸಜ್ಜಾಗಿದ್ದು, ಥಳಿ ಬಳಿಯ ಡಂಕಣಿಕೋಟೆ ಪ್ರದೇಶದಲ್ಲಿ ಜಮಾಯಿಸಿ ಕರ್ನಾಟಕದೊಳಕ್ಕೆ ಪ್ರವೇಶಿಸಲು ಪ್ರಯತ್ನ ನಡೆಸಿದ್ದಾರೆ. ಮೇಕೆದಾಟು ಯೋಜನೆ ಕಾರ್ಯಗತವಾದರೆ, ತಮಿಳುನಾಡಿನ ಗಡಿಭಾಗದ ರೈತರಿಗೆ ಭಾರೀ ತೊಂದರೆಯಾಗಲಿದೆ ಎಂಬುದು ಆ ಪ್ರದೇಶದ ರೈತರ ವಾದವಾಗಿದೆ.
ಈ ಹಿನ್ನೆಲೆಯಲ್ಲಿ ಕಾವೇರಿ ನದಿಯ ಮೇಕೆದಾಟು ಯೋಜನೆ ಕಾಮಗಾರಿ ತಡೆಯುವುದು ಅವರ ಉದ್ದೇಶವಾಗಿದೆ. ಆದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಕರ್ನಾಟಕ ಪೊಲೀಸರು, ಈ ಭಾಗದಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಿ ಪ್ರತಿಭಟನಕಾರರು ರಾಜ್ಯದ ಗಡಿಯೊಳಕ್ಕೆ ಪ್ರವೇಶಿಸದಂತೆ ತಡೆಯಲು ಮುಂದಾಗಿದ್ದಾರೆ.
ಮೇಕೆದಾಟು ಬಳಿ ಬಂದು ಅಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟಿಸುವುದು ತಮಿಳುನಾಡು ರೈತರ ಉದ್ದೇಶವಾಗಿದೆ. ಬೆಂಗಳೂರು, ಹೆಸರಘಟ್ಟ ಹಾಗೂ ಕಣ್ವ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಕರ್ನಾಟಕ ಸರ್ಕಾರ ಮೇಕೆದಾಟು ಬಳಿ 50 ಟಿಎಂಸಿ ಸಂಗ್ರಹ ಸಾಮರ್ಥ್ಯದ ಯೋಜನೆ ರೂಪಿಸಿತ್ತು. ಆದರೆ ಇದರಿಂದ ಸುಮಾರು ಎರಡೂವರೆ ಸಾವಿರ ಎಕರೆಗಳಷ್ಟು ಅರಣ್ಯ ಭೂಮಿ ನೀರು ಪಾಲಾಗುವ ಹಿನ್ನೆಲೆಯಲ್ಲಿ ದೊಡ್ಡ ಅಣೆಕಟ್ಟೆ ಬದಲಿಗೆ ಸಣ್ಣ ಸಣ್ಣ ಬ್ಯಾರೇಜ್ ಗಳನ್ನು ನಿರ್ಮಿಸುವುದು ಸರ್ಕಾರದ ಚಿಂತನೆಯಾಗಿದೆ. ಆದರೆ ಈ ಯೋಜನೆಗೂ ಕೂಡ ಪರಿಸರಕ್ಕೆ ಸಂಬಂಧಪಟ್ಟ ಕೆಲವು ಸಮಸ್ಯೆಗಳು ಎದುರಾಗಿರುವುದರಿಂದ ಕಾಮಗಾರಿ ಅನುಷ್ಠಾನ ಇನ್ನೂ ಆರಂಭವಾಗಿಲ್ಲ. ಆದರೂ ಈ ಮಧ್ಯೆ ಕರ್ನಾಟಕ ರಾಜ್ಯ ಸರ್ಕಾರದ ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿಗೆ ತರದಂತೆ ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು.