ನವದೆಹಲಿ : ಅರವಿಂದ್ ಕೇಜ್ರಿವಾಲ್ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಕಾರಣಕ್ಕೆ ತಮ್ಮನ್ನು ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ವಜಾಗೊಳಿಸ ಬಹುದು ಎಂಬ ವರದಿಗಳ ಬೆನ್ನಲ್ಲೇ ಹಿರಿಯ ಮುಖಂಡರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಮೆತ್ತಗಾಗಿದ್ದಾರೆ.
ಈ ನಡುವೆ ಇಬ್ಬರೂ ಭಿನ್ನಮತೀಯ ನಾಯಕರು ಹಾಗೂ ಆಮ್ ಆದ್ಮಿ ಪಕ್ಷದ ನಡುವೆ ರಾಜೀ ಸೂತ್ರವೊಂದು ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಯೋಗೇಂದ್ರ, ಪ್ರಶಾಂತ್ ಭೂಷಣ್ ಅವರು ಬುಧವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.
ನಾನು ಹಾಗೂ ಪ್ರಶಾಂತ್ ಅವರು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ದನಿ ಎತ್ತಿದ್ದೇವೆ. ಅದರಲ್ಲಿ ತಪ್ಪೇನೂ ಇಲ್ಲ. ಆಮ್ ಅದ್ಮಿ ಪಕ್ಷಕ್ಕೆ ಅರವಿಂದ್ ಕೇಜ್ರಿವಾಲ್ ಅವರೇ ರಾಷ್ಟ್ರೀಯ ಸಂಚಾಲಕ. ಅದರಲ್ಲಿ ಅನುಮಾನವೇ ಇಲ್ಲ. ಆದಾಗ್ಯೂ ತಮ್ಮ ವಿರುದ್ಧ ಕ್ರಮ ಕೈಗೊಂಡರೆ ಜನರ ಪರ ಕೆಲಸ ಮಾಡುತ್ತೇನೆ' ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಪ್ರಶಾಂತ್ ಭೂಷಣ್ ಅವರ ತಂದೆ, ಪಕ್ಷದ ಸಂಸ್ಥಾಪಕ ಸದಸ್ಯ ಶಾಂತಿ ಭೂಷಣ್ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ್ದು, ಕೇಜ್ರಿವಾಲ್ ಅವರು ಸಂಚಾಲಕರಾಗಿ ಮುಂದುವರಿಯಬೇಕು. ಯೋಗೇಂದ್ರ ಹಾಗೂ ಪ್ರಶಾಂತ್ ಅವರು ಕೇಜ್ರಿವಾಲ್ ನ್ನು ಬೆಂಬಲಿಸಬೇಕು. ಪಕ್ಷದಲ್ಲಿ ಯಾವುದೇ ಭಿನ್ನಮತ ಇರಬಾರದು. ಯಾವ ಉದ್ದೇಶವನ್ನಿಟ್ಟುಕೊಂಡು ಪಕ್ಷ ಸ್ಥಾಪಿಸಲಾಯಿತೋ ಆ ಗುರಿ ತಲುಪಲು ಶ್ರಮಿಸಬೇಕು ಎಂದು ಸಲಹೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶಾಂತಿ ಭೂಷಣ್ ಕೂಡ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿದ್ದರು ಎಂಬುದು ಗಮನಾರ್ಹ.